ನಾನು ಹೀಗಿರೋದು ನನ್ ತಪ್ಪಾ!!!

“ಅವಳ ವಿಶಯ ಸ್ವಲ್ಪ ತಿಳ್ಕೋಬೇಕು ಲೋಕೀ, ಆಕೆ ಎಲ್ಲಿ ಸಿಗ್ತಾಳೆ” ಅಂದೆ.

“ಏ ನೀನಾ ಇಲ್ಲಿ ಯಾಕೇ ಬಂದೇ ಮತ್ತೆ?
ಇನ್ನೊಮ್ಮೆ ನೀನೇನಾದ್ರೂ ಸ್ಟೇಷನ್ ಪಕ್ಕ ಕಂಡ್ರೆ ಸೊಂಟಾ ಮುರಿದುಹಾಕ್ತೀನಿ. ನಡೀಯೇ ಓಡು ಓಡು, ಬಿಟ್ರೆ ನೋಡು, ಲಾಟಿ ಕೋಲು ಚೂರಾಗಬೇಕು.
ರಾಸ್ಕಲ್,ಕಿತ್ತೋದ್ ಲೌಡಿ ತಂದು.
ಮರ್ಯಾದೇಯಾಗಿ ಮನೇಲಿರೋದ್ ಬಿಟ್ಟು ಬಸ್ಸ್ ಹತ್ತಿ ಬಂದುಬಿಡ್ತಾಳೆ ಲೋಫರ್”.

“ಯಾಕ್ರೀ ನಿಮಗೇನಾಗುತ್ತೆ?
ದಾರೀಲಿ ನನ್ ಪಾಡಿಗೆ ನಾನು ನಡೆದುಕೊಂಡು ಹೋದ್ರೇ, ನಿಮ್ ಕೆಲಸ ನೀವು ಮಾಡ್ರೀ ಸುಮ್ಮೆ.
ಕೈಯಲ್ಲಿ ಏನೂ ಕಿಸಿಯೋಕಾಗದಿದ್ರೂ ಒಬ್ಬಂಟಿ ಹೆಣ್ಮಕ್ಕಳ್ ಮೇಲೇ ಜೋರುಮಾಡೋಕೇನು ಕಮ್ಮಿ ಇಲ್ಲಾ!
ನಮ್ಮ ತಾಲೋಕೇ ಕೆಟ್ಟೋಯ್ತು.
ಹೆಣ್ಮಕ್ಕಳಿಗೆ ರಕ್ಷಣೆ ಕೊಡಬೇಕಾದ ಪೋಲೀಸ್ಗಳು ಪೋಲಿಗಳ ಜೊತೆ ಸೇರಿ ದಾರೀಲೇ ದೌರ್ಜನ್ಯ ಮಾಡ್ತಿದ್ದರೂ ಕೇಳೋರಿಲ್ಲಾ!

“ಏ ಮಾದೇವ ಅದೇನೋ ಅವಳ್ದು ಗಲಾಟೆ.
ಮತ್ತೆ ಯಾಕೋ ಬಂದ್ಲು ಇತ್ತಲಾಗೆ.ಮೊದ್ಲು ಅವಳ್ನ ಎದೆಗೆ ಒದ್ದು ಓಡಿಸೋದು ಬಿಟ್ಟು ಇನ್ನೂ ಏನೋ ಬರೀ ಲಾಟೀಲೀ ಆಟಾ ಆಡುಸ್ತಾವ್ನೇ.
ತಲೇ ತಿನ್ನೋಕೇ ಹುಟ್ಟಿದಾಳೇ ಈ ಬೇವರ್ಸಿ, ತಲೇ ಮಾಸಿದೋಳು. ಮನೆಯವರಿಗೆಲ್ಲಾ ಅಯ್ಯೋ ಅನ್ನಿಸೋದಲ್ಲದೇ ಇಡೀ ತಾಲೋಕಿನ ಜನಕ್ಕೇಲ್ಲಾ ತಲೆನೋವು. ”
ಅಂತ ಆ ಕನಿಷ್ಟ ಪೇದೆಗೆ ಹೇಳಿದ ತಾಲೂಕಿನ ಹೆಸರಾಂತ ಪತ್ರಿಕೆಯ ಆ ಪತ್ರಕರ್ತನತ್ತ ತಿರಸ್ಕಾರದಿಂದ ನೋಡಿದ ಆ ಹೆಣ್ಮಗಳು ಒಮ್ಮೆ ಜೋರಾಗಿ ಕ್ಯಾಕರಿಸಿ ಉಗಿದಳು.

“ಥೂ ನೀನೂ ಒಬ್ಬ ಪತ್ರಕರ್ತನೇನಯ್ಯಾ.
ನಿನ್ನ ಕಣ್ಣ ಮುಂದೇನೇ ಒಬ್ಬಂಟಿ ಹೆಣ್ಣು ಮಗಳಿಗೆ ಇಷ್ಟೋಂದು ಅವಮರ್ಯಾದೆ ಆಗ್ತಿದ್ದರೂ ಅವನಿಗೇ ಸಪೋರ್ಟ್ ಮಾಡ್ತೀಯಲ್ಲಾ.
ನಿನ್ ಯೋಗ್ಯತೇ ಏನೂಂತಾ ನನಗೆ ಗೊತ್ತಿಲ್ಲವಾ? ನಾನೇನಾದ್ರೂ ನೀನು ಅವತ್ತು ಮಾಡಿದ್ದು ಹೇಳಿದ್ರೆ ನಿನ್ ಹೆಂಡ್ತಿ ನಿನ್ನ ಯಾವುದ್ರಲ್ಲಿ ಹೊಡಿತಾಳೋ ಗೊತ್ತಿಲ್ಲಾ!
ನಾನು ತಾಲೂಕಿಗೇ ತಲೇನೋವಾ? ನೀನು ನನ್ನ ಮೈ ನೋವಾಗಿದೇ ನಾವಿಬ್ಬರೇ ಬಂಡೀಪುರಕ್ಕೋಗಿ ಒಂದು ರಾತ್ರಿ ಕಳೆದು ಬರೋಣಾ ಬರ್ತೀಯಾ ಪ್ಲೀಸ್ ಈ ಬಾನುವಾರ ಅಂದೆಯಲ್ಲಾ ನಾನು ನಿನ್ನ ಪತ್ರಿಕೆಯಲ್ಲಿ ಕೆಲಸ ವಾಡುವಾಗ ಥೂ ನಿನ್ ಮುಖಕ್ಕಿಷ್ಟು ಬೆಂಕೀಹಾಕ”.

“ಏ ಮಾದೇವ ನಿಮ್ ಸಾಹೇಬ್ರು ಇದಾರೇನೋ ಇವಳನ್ನ ಸ್ವಲ್ಪ ಒಳಕ್ಕಾಕಿಸಿದರೆ ನಾವಾದ್ರೂ ನೆಮ್ಮದಿಯಾಗಿರ್ತ್ತೀವಿ, ಹೊರಗಡೇಲೀ, ಎಲ್ಲೋದ್ರೋ ನಿಮ್ ಸರ್ಕಲ್ಲು?
ಮೊದಲು ಪೋನ್ ಮಾಡೋ! ಈ ತಿಕಲೀನ ಒಂದು ವಾರ ಒಳಗಿಟ್ಟರೆ ಎಲ್ಲಾ ಸೇರಿ ಸರೀಗೆ ಇವಳ ದೇಹ, ಬುದ್ದಿ,ಎಲ್ಲಾ ಶುದ್ದಿ ಮಾಡಿ ಸರೀ ಮಾಡಬಹುದು”

“ಅಣ್ಣಾ ಇವಳಿಗೆ ನಮ್ ಸ್ಟೇಷನ್ ಸರೀಯಾಗಲಿಕ್ಕಿಲ್ಲಾ!
ಮೋಸ್ಟ್ಲೀ ಆ ನಿಮ್ಹಾನ್ಸ್ನಲ್ಲೂ ಇವಳಿಗೆ ಉಷಾರು ಮಾಡೋ ಔಷದ ಇರಲಿಕ್ಕಿಲ್ಲಾ ಅನ್ನಿಸುತ್ತೆ ಹಹ್ಹಹ್ಹಹ್ಹಾ”
ಅಂದ ಮಾದೇವನೆಡೆಗೆ ಕೋಪದಿಂದಾ ನೋಡಿದ ಅವಳು,
“ಕರಿಯೋಲೋ ನಿಮ್ ಸಾಹೇಬುನ್ನಾ! ಅವನು ಎಂಥಾ ಕಚ್ಚೆಹರುಕಾ ಅಂಥಾ ಇವತ್ತು ಇಡೀ ತಾಲೂಕಿಗೇ ತಿಳಿಸ್ತೀನೀ.
ನಾನು ಮೊದಲನೇ ಸಲಾ ನಮ್ಮಪ್ಪನ್ನ ನಾನು ಅವನ ಗಂಡು ಮಕ್ಕಳಥರಾನೇ ಅವನ ಆಸ್ತೀಲಿ ಭಾಗ ಕೇಳಿದ್ದಕ್ಕೆ ಬೆನ್ನು ಬಿರಿಯೋಹಾಗೆ ಒಡೆದಿದ್ದನಲ್ಲಾ ಆಗ ಏನು ಮಾಡಿದ್ದ ಗೊತ್ತೇನೋ?

ನಾನು ಕಂಪ್ಲೇಂಟು ಕೊಡೋಕೋದರೆ ಅವನು ಅರ್ಜಿ ತೊಗೋಳೊದು ಬಿಟ್ಟು, ನೀನು ಇನ್ನೂ ತುಂಬಾ ಚಿಕ್ಕವಳು ಇದ್ದೀಯಾ,
ಯಾಕೆ ಹೀಗೆ ಒಬ್ಬಂಟಿಯಾಗಿರ್ತೀಯಾ, ನಾನು ನಿನ್ನನ್ನ ನನ್ನ ಹೆಂಡತಿಗಿನ್ನಾ ಚೆನ್ನಾಗಿ ನೋಡ್ಕೋತೀನೀ,
ನಿನಗೇ ಬೆಂಗಳೂರಲ್ಲಿ ನನ್ನ ಸ್ವಂತ ಮನೆ ನಿನ್ನ ಹೆಸರಿಗೇ ಬರೆದು ಮಹಾರಾಣಿ ಥರಾ ನೋಡ್ಕೋತೀನಿ,
ಮಕ್ಕಳು ಮರಿ ಮಾಡ್ಕೋಂಡು ಹಾಯಾಗಿರೋಣ, ಏನಂತೀಯಾ?
ಅಂದಿದ್ದಾ ಅಂಥಾ ಕಿತ್ತೋದೋನು ನಿಮ್ಮ ಸಾಹೇಬಾ, ಕಂಡಿದ್ದೀನಿ ಬಿಡೋ ಅವನ್ನ”

ಅಲ್ಲೇ ನಿಂತಿದ್ದ ಮೂರು ಪೋಲಿ ಹುಡುಗರು ಪೋಲೀಸನ ಮುಂದೆಯೇ ಅವಳ ಹತ್ತಿರ ಹೋಗಿ
“ಬಾರೇ ಪಿಚ್ಚರಿಗೋಗೋಣಾ, ಒಳ್ಳೇ ಎ ಸರ್ಟಿಫಿಕೇಟ್ ಬಂದೈತೆ, ಇವರ ಹತ್ರ ಯಾಕೆ ಕೂಗಾಡ್ತೀಯಾ” ಅಂತ ಕರೆದಾಗ
ಅವಳು “ಕಾಲಲ್ಲಿ ಏನಿದೆ ನೋಡಿದಿಯಾ ಕತ್ತೆಬಡವಾ ನಿಂಗೆ ಅಕ್ಕ ತಂಗಿ ಯಾರೂ ಇಲ್ಲವೇನೋ?”
ಅಂದರೂ ಅವರಲ್ಲಿ ಒಬ್ಬ ಅವಳ ಕೈ ಹಿಡಿದು ಪೋಲೀಸ್ ಠಾಣೆಯ ಪಕ್ಕದಲ್ಲೇ ಇರುವ ಟಾಕೀಸಿನ ಕಡೆ ದರಗುಟ್ಟಿ ಎಳೆದುಕೊಂಡು ಹೋಗುವುದನ್ನು ನೋಡಿದ ನಾನು
ಪೋಲೀಸನಿಗೆ ಸನ್ನೆ ಮಾಡಿ ಅವಳನ್ನು ಬಿಡಿಸಲು ಹೇಳಿದೆ.

ಮಾದೇವ ಆ ಪೋಲಿಗಳಿಗೆ
“ಹಾಳಾಗಿಹೋಗ್ಲೀ ಬಿಟ್ಟುಬಿಡ್ರೋ ಅವಳನ್ನ” ಅಂದು ಬಿಡಿಸಿದ.

ಅಲ್ಲೇ ನಿಂತಿದ್ದ ಪತ್ರಕರ್ತ
“ಸಾರ್ ಅವಳ ರಗಳೆ ನಿಮಗೆ ಗೊತ್ತಿಲ್ಲಾ, ಅವಳು ಸರೀ ಇಲ್ಲಾ ಸರ್, ಒಂಥರಾ ಗಂಡುಬೀರಿ, ಮನೇಲಿ ಅವರ ಅಪ್ಪ, ಅಣ್ಣ, ಮತ್ತೆ ಅವಳ ಊರಲ್ಲೂ ಯಾರನ್ನೂ ನೆಮ್ಮದಿಯಾಗಿರಲು ಬಿಟ್ಟಿಲ್ಲಾ. ಅವಳ ಸಹವಾಸ ಸರಿಯಿಲ್ಲಾ ಬಿಟ್ಟುಬಿಡಿ ಸಾರ್”. ಅಂದ.

ನಾನು ಆಕೆಯು ಆ ದುಷ್ಟರಿಂದ ದೂರಾಗಿದ್ದು ನೋಡಿ ಸಮಾಧಾನದಿಂದಾ
ನನ್ನ ಹೆಂಡತಿಯ ಹೊಸಾ ಗಾಡಿಗೆ ನಂಬರ್ ಬರೆಸಲು ಸ್ಟಿಕರ್ ಕಲಾವಿದನಾದ ಗೆಳೆಯನ ಅಂಗಡಿಗೆ ಹೋದೆ.

ಈ ಇಡೀ ಪ್ರಹಸನ ನೋಡುತ್ತಾ ಇದ್ದ ಗೆಳೆಯ
“ಸಾರ್ ನಾವು ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಬೇಕಾ ಸಾರ್? ನಾವೇನೂ ಮಾಡೋಕಾಗೋಲ್ವಾ ಸಾರ್?” ಅಂದಾಗ

“ಅವಳ ವಿಶಯ ಸ್ವಲ್ಪ ತಿಳ್ಕೋಬೇಕು ಲೋಕೀ, ಆಕೆ ಎಲ್ಲಿ ಸಿಗ್ತಾಳೆ” ಅಂದೆ.

“ತಡೀರೀ ಸಾರ್ ಅವಳು ಮೋಸ್ಟಲೀ ಮಹಿಳಾ ಮತ್ತು ಮಕ್ಕಳ ಇಲಾಖೆ ಹತ್ರ ಹೋಗಿರ್ತಾಳೆ, ನಮ್ ಹುಡುಗುನ್ನ ಕಳಿಸಿ ಕರೆಸೋಣಾ” ಅಂದು
“ಏ ಪರಮೀ ಆ ತಿಮ್ಮನಹಳ್ಳಿ ಹುಡುಗಿ ಗೊತ್ತಾ? ಅವಳು ಮೋಸ್ಟಲೀ ಮಹಿಳಾ ಮತ್ತು ಮಕ್ಕಳ ಇಲಾಖೆ ಹತ್ರ ಇರ್ತಾಳೆ ಹೋಗಿ ಲೋಕಣ್ಣ ಕರೀತಾಯ್ತೆ ಬರ್ಬೇಕಂತೆ ಅನ್ನು ಹಂಗೇ ಬರುವಾಗ ಮೂರು ಲೋಟ ಕರ್ಬೂಜಾ ಜ್ಯೂಸ್ ತೊಗಂಡು ಬಾ” ಎಂದ.

“ಅಲ್ಲಾ ಲೋಕಿ ಅವಳ ಸಮಸ್ಯೆ ಏನು?
ಈ ಜನಾ ಯಾಕೆ ಅವಳನ್ನ ಇಷ್ಟು ಸದರ ಸಲೀಸು ಮಾಡಿಕೊಂಡಿದಾರೆ?
ಹಾದಿ ಬೀದೀಲಿ ಪೋಲಿಗಳು ಅವಳ ಮೈ ಮುಟ್ಟುವಷ್ಟು ಅವಳನ್ನ ಕೀಳಾಗಿ ನೋಡಿದರೂ ಪೋಲೀಸರು ಪತ್ರಕರ್ತರೂ ಮೂಕವಾಗಿದಾರಲ್ಲ ಅದೇ ನನಗಾಷ್ಚರ್ಯ” ಅಂದೆ.

“ಸಾರ್ ಆ ಯಮ್ಮ ನಮ್ಮ ಸರ್ವೋದಯಾ ಡಿಗ್ರೀ ಕಾಲೇಜಲ್ಲಿ ಯಾವಾಗ್ಲೂ ಫಸ್ಟ್ ಬರ್ತಿದ್ಲು.
ಒಳ್ಲೇ ಕವಯಿತ್ರಿ, ಕಥೆಗಾರ್ತಿ, ವಿಮರ್ಶಕಿ, ಪತ್ರಕರ್ತೆ ಕೂಡಾ ಆಗಿ ಅದೇ ಅವನು ಇದಾನಲ್ಲಾ ಮುಠ್ಠಾಳ ಅವನ ಪತ್ರಿಕೆಯಲ್ಲೇ ಕೆಲಸ ಮಾಡ್ತಿದ್ಲು.
ಇವತ್ತು ಗೊತ್ತಾಯ್ತು ಅವಳು ಅಲ್ಲಿ ಯಾಕೆ ಕೆಲಸ ಬಿಟ್ಲು ಅಂಥಾ.
ಥೂ ಈ ತುಂಬಾ ಓದಿರೋರಲ್ಲೂ ಹಲ್ಕಾ ಜನಾ ಇರ್ತಾರಾ ಸಾರ್, ಅವರು ಸ್ಟೇಜ್ ಮೇಲೆ ಭಾಷಣ ಮಾಡೋದು ನೋಡಿದರೆ ಏನು ಮಹಾ ಸಾಚಾ ಸತ್ಯ ಹರಿಶ್ಚಂದ್ರರ ಥರಾ ಪೋಸ್ ಕೊಡ್ತಾರೆ ಅಲ್ಲವಾ ಸಾರ್” ಅಂದ.

“ನಿಜಾ ಆದರೆ ಅವಳ ಮನೆಯವರದ್ದು ಏನಪ್ಪಾ ಸಮಸ್ಯೆ?
ಅವಳನ್ನ ಯಾಕೆ ಹೀಗೆ ಆಚೆ ಬಿಟ್ಟಿದ್ದಾರೆ? ಎಂದೆ.

ಅವನು “ಸಾರ್ ಅದೊಂದು ದುರಂತ ಕಥೆ ಸಾರ್” ಅಂದು ಮುಗಿಸೋದರೊಳಗೆ ಅವಳು ನಮ್ಮ ಅಂಗಡಿಗೆ ಬಂದು ತಲುಪಿದವಳು,

“ಸಾರ್ ನಾನು ನಿಮ್ಮ ಹತ್ರ ಮಾತನಾಡಬಹುದಾ ಸಾರ್?
ನನ್ನ ಕಷ್ಟ ಕೇಳೋರೇ ಇಲ್ಲಾ ಸಾರ್? ನಾನು ಯಾರ ಹತ್ರ ಹೇಳಿದರೂ ನನ್ನನ್ನ ಹುಚ್ಚಿ, ಲೂಸ್, ನೀನೇ ಸರಿಯಿಲ್ಲಾ ಅಂಥಾರೆ,
ನಾನೇನು ತಪ್ಪು ಮಾಡಿದ್ದೀನಿ ಸಾರ್ ಅಂಥಾದ್ದು” ಅಂದು ಕಣ್ಣಲ್ಲಿ ನೀರಾದಳು.

ಪರಮಿ ತಂದ ಜ್ಯೂಸನ್ನು ಅವಳಿಗೆ ಕುಡಿಯಲು ಕೊಟ್ಟು ಅವಳು ಹೇಳುವ ಅವಳದೇ ಕಥೆಗೆ ಕಿವಿಯಾದೆವು.

“ಸಾರ್ ಮೊನ್ನೆ ನಮ್ಮೂರಲ್ಲಿ ಆ ಮಾಜಿ ಮೆಂಬರ್ರ್ ಶಿವಲಿಂಗ ಇದಾನಲ್ಲಾ ನಾನು ಒಬ್ಬಳೇ ಮನೆಲಿದ್ದಾಗ ಮದ್ಯಾಹ್ನ ಮನೆಗೇ ನುಗ್ಗಿ ನನ್ನನ್ನ ರೇಪ್ ಮಾಡೋಕೆ ಪ್ರಯತ್ನ ಪಟ್ಟ ಸಾರ್. ನಾನು ಆ ತೋಟದ ಮನೆ ಸುತ್ತಾ ಓಡಾಡಿ ತಪ್ಪಿಸಿಕೊಳ್ಳಲು ಕೂಗಾಡುತ್ತಿದ್ದರೂ ಆ ಕಾಲೋನಿ ಜನ ಕಣ್ಣು ಬಿಟ್ಟು ನೋಡುತ್ತಿದ್ದರೇ ವಿನಹ ಯಾರೂ ನನ್ನನ್ನು ರಕ್ಷಿಸಲು ಬರಲಿಲ್ಲಾ ಸಾರ್, ಎಲ್ಲ ಷಂಡರ ವಂಶಕ್ಕುಟ್ಟಿದವರಂತೆ ಚಿತ್ರದ ಗೊಂಬೆಗಳ ಥರಾ ನಿಂತಿದ್ರು.

ಅವನು ಯಾರೂ ಬರಲ್ಲಾ ಬಾರೆ, ನಾನು ನಿನ್ನನ್ನ ಅವರ ಮುಂದೇನೇ ರೇಪ್ ಮಾಡಿದ್ರೂ ನೀನು ಹುಚ್ಚಿ ಅಂಥಾ ಎಲ್ಲರಿಗೂ ಗೊತ್ತಿರೋದ್ರಿಂದಾ ನಿನ್ನ ಸ್ಟೇಟ್ಮೆಂಟ್ ಯಾವ ಪೋಲೀಸೂ ತಗಳಲ್ಲಾ ಬಿಡೇ ಅಂದು ನನ್ನನ್ನ ಅವರ ಮುಂದೆಯೇ ತಬ್ಬಿ ಹಿಡಿದು ಮುತ್ತಿಟ್ಟ.

ಮೂರು ದಿನದಿಂದಾ ಪೋಲೀಸ್, ಮಹಿಳಾ ಇಲಾಖೆ, ಪತ್ರಕರ್ತರ ಸಂಘ,ಮಹಿಳಾ ಆಯೋಗ ಅಂಥಾ ಅಲೆದಿದ್ದೇ ಬಂತು ಯಾರೂ ಕೇಳ್ತಿಲ್ಲಾ ನೀವೇ ನೋಡಿದ್ರಲ್ಲಾ! ಅಂದು ನಿಟ್ಟುಸಿರು ಬಿಟ್ಟಳು.

“ಅಲ್ಲಮ್ಮಾ ನೀನು ಆ ಶಾಸಕನ ಹತ್ರ ಹೋಗಿ ದೂರು ಕೊಡಬಹುದಿತ್ತಲ್ಲಾ ಯಾರೂ ನನ್ನ ಅಹವಾಲು ಕೇಳುತ್ತಿಲ್ಲಾ ಅಂಥಾ” ಅಂದೆ.

“ಸಾರ್ ಆ ವಯ್ಯ ಶುಧ್ಧ ಇದಾನೆ ಅಂದುಕೊಂಡಿದ್ದೆ.
ನನ್ನ ಕಷ್ಟ ಎಲ್ಲಾ ಕೇಳೋನ ಥರಾ ಆ ಪ್ರವಾಸಿ ಮಂದಿರದಲ್ಲಿ ಕೂತಿದ್ದ ಅವನ ಪಟಾಲಮ್ಮನ್ನು ಹೊರಗೆ ಕಳಿಸಿ,
ಆಮೇಲೆ ಏನು ಹೇಳಿದ ಗೊತ್ತಾ?
ನಾನು ಎಲ್ಹೆಚ್ಚಲ್ಲಿ ಕ್ಲರ್ಕ್ ಕೆಲಸ ಕೊಡಿಸ್ತೀನೀ ನಾನು ಅಲ್ಲಿದ್ದಾಗ ನನಗೆ ಸಹಕರಿಸ್ತೀಯಾ ನೋಡು,
ನಿನಗೂ ಒಂದು ರಕ್ಷಣೆ ಇರುತ್ತೆ ನನಗೂ ಬೇಜಾರು ಕಳೆಯುತ್ತೇ ಅಂಥಾನಲ್ಲಾ ಸಾರ್ ನಾನು ಇನ್ನು ಯಾರನ್ನ ನಂಬಲೀ?

“ಸರೀ ಮನೆಯವರು ಯಾಕೆ ನಿನ್ನನ್ನ ದೂರ ಮಾಡ್ತಿದ್ದಾರೆ?”

“ನಾನು ನನ್ನಪ್ಪನಿಗೆ ಅವನ ಗಂಡು ಮಕ್ಕಳ ಥರಾನೇ ಅವನ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದ್ದೇ ಪ್ರಾರಂಭವಾಯ್ತು ನೋಡಿ ನನ್ನ ಈ ಹೋರಾಟ.
ನನ್ನ ಅಪ್ಪನೇ ನನಗೆ ಹೊಡೆದ, ಬಡಿದ, ಮನೆಯಿಂದ ಹೊರಹಾಕಿದ. ನನ್ನನ್ನು ರಕ್ಷಿಸಬೇಕಿದ್ದಾ ನನ್ನ 3 ಜನ ಅಣ್ಣಂದಿರು ನನಗೆ ಹುಚ್ಚು ಹಿಡಿದಿದೆ ಅಂಥಾ ಸುಳ್ಳು ಸುದ್ದಿ ಹಬ್ಬಿಸಿದರು. ಅವರ ಹೆಂಡತಿಯರೇ ನಾನು ಕೆಟ್ಟೋಗಿದ್ದೀನೀ, ಯಾವನ್ನೋ ಕದ್ದು ಮದುವೆಯಾಗಿದ್ದಾಳೆ, ಕಳ್ಳ ಬಸಿರು ಮೂರು ಬಾರಿ ತೆಗೆಸಿದ್ದಾಳೆ, ಎಲ್ಲಕ್ಕೂ ಸಾಕ್ಷಿ ಇದೆ ಅಂಥಾ ನನ್ನ ಮರ್ಯಾದೆ ಮೂರು ಕಾಸಿಗಿಲ್ಲದಂತೆ ಹರಾಜು ಹಾಕಿಬಿಟ್ಟರು.

ಅವತ್ತಿಂದಾ ನಮ್ಮೂರಿನ ಪುಂಡರು ನಾನು ಮನೆ ಬಿಟ್ಟು ಟೌನಿಗೆ ಬರಲು ಬಸ್ಸಿಗೆ ಆಚೆ ಬರೋದನ್ನೇ ಕಾಯ್ತಿದ್ದು ನಮ್ಮೂರಿನ ಗೇಟಿಗೆ ಹೋಗುವ ದಾರಿಯಲ್ಲಿ ಎಷ್ಟು ಸಲಾ ಎಳೆದಾಡಿದ್ದಾರೆ ಅಂದ್ರೆ ಲೆಖ್ಖಕ್ಕಿಲ್ಲಾ ಸಾರ್, ಯಾಕ್ರಪ್ಪಾ ಹೀಗೆ ಮಾಡ್ತೀರಾ ಅಂದ್ರೆ ಅಲ್ಲಾ ಕಣೇ ಅವನು ಯಾವನೋ ಬೇರೆಜಾತಿಯವನು ನಿನ್ನ ಮುಟ್ಟಿದ್ರೆ ಏನೂ ಅಗಾಕಿಲ್ವಾ ನಾವು ಮುಟ್ಟಿದ್ರೆ ನೀನು ಕೆಟ್ಟೋಗ್ತೀಯಾ ಬಾರೇ ಕಂಡಿದ್ದೀವೆ ಅಂಥಾರೆ ಸಾರ್, ನಾನು ಯಾರ್ಯಾರ್ ಮೇಲೆ ಅಂಥಾ ಕಂಪ್ಲೇಂಟ್ ಕೊಡ್ಲೀ ಸಾರ್?”

“ಅಲ್ಲಮ್ಮಾ ಮಹಿಳಾ ಆಯೋಗಕ್ಕೇ ಹೋಗಿ ಕಂಪ್ಲೇಂಟ್ ಕೊಡೋಕಿಲ್ಲವಾ ಅಂದೆ.”ನಾನು.

“ಆ ಮಹಿಳಾ ಆಯೋಗಕ್ಕೆ ಹೋದ್ರೆ ಅವಳು ನನ್ ಕಂಪ್ಲೇಂಟ್ ತೊಗೋಳೋಕೆ ಅದೇ ಆ ಕಿತ್ತೋದ ಎಮ್ಮೆಲ್ಲೆಗೆ ಪೋನ್ ಮಾಡಿ ತಗಳನಾ ಸಾರ್ ಅಂದ್ಲು.
ಅವನು ಬೇಡಾ ಅಂದಿರಬೇಕು ಅದಕ್ಕೇ ಅವಳು ನನಗೇ ಬುದ್ದಿವಾದ ಹೇಳಿ ಸ್ವಲ್ಪ ಇವತ್ತಿನ ಪ್ರಪಂಚದಲ್ಲೀ ಬದುಕೋದು ಕಲೀ, ಅವರು ಕೆಲಸ ಕೊಡುಸ್ತೀನೀ ಅಂದ್ರೂ ಬೇಡಾ ಅಂದ್ಯಂತೆ ಏನು ದುರಹಂಕಾರ ನಿನಗೆ, ನಿನ್ನನ್ನ ಯಾರಾದ್ರೂ ಜಾಣೆ ಅಂಥಾರಾ ದಡ್ಡೀ ಅಂದು ಮತ್ತೆ ಈ ಕಡೆ ಬರಬೇಡಾ ಅಂದ್ಲು ಸಾರ್”.

“ಹೋಗ್ಲೀ ನಿನ್ನ ಆಸ್ತಿಯಲ್ಲಿ ಪಾಲು ಕೊಟ್ಟನಾ ನಿಮ್ಮಪ್ಪಾ” ಅಂದೆ.

“ಕೊಟ್ಟ ಅಲ್ಲಾ, ಪಡೆದುಕೊಂಡೇ ಸಾರ್, ಆ ಹಾಳು ತೋಟ, ಹಾಳು ಮನೆ ಕೊಟ್ಟಿದ್ದಾರೆ”.

ನಾನು ಲೋಕಿಗೆ ಕೇಳಿದೆ “ನಿನಗೆ ಏನಾದ್ರೂ ಮಾಡಬೇಕು ಅಂತಿದ್ದೆಯಲ್ಲಾ?ಇವಳನ್ನ ಮದುವೆಯಾಗಿ ರಕ್ಷಣೆ ಕೊಡ್ತೀಯಾ ಅಂದೆ!.

ಇಬ್ಬರ ಕಣ್ಣಲ್ಲೂ ಹೊಸ ಬೆಳಕು ಮಿಂಚಿತು.

1mQV3J

ಅದು ನನ್ನ ಹುಟ್ಟಿದ ಹಬ್ಬವೋ ಅಥವಾ ಮರುಹುಟ್ಟೋ !!!

ಅದೇನು ಹಣೇಬರವೋ ಏನೋ? ನಾನು ನಿನ್ನನ್ನು ಹೀಗೇ ಭೇಟಿಮಾಡಬೇಕೆಂದು ಪೂರ್ವ ನಿಶ್ಚಯವಾದಂತೆ ಕಾಣುತ್ತದೆ. ನನ್ನೆಲ್ಲ ಕಾರ್ಯಕ್ರಮಗಳೂ ಕನಿಷ್ಠ ವರ್ಷವೊಂದರಷ್ಟು ಮುಂಚಿತವಾಗಿ ಯೋಜಿತವಾಗಿರುತ್ತವೆ. ಅದನ್ನು ತಿಂಗಳಿಗೊಮ್ಮೆ ಮರು ಪರಿಶೀಲಿಸಿ ಪ್ರತೀ ವಾರಕ್ಕಾಗುವಷ್ಟು ಸಿದ್ಧತೆ ಮಾಡಿಕೊಂಡಿರುತ್ತೇನೆ. ಕನಿಷ್ಟ ನಾನು ಮಾಡುವ ರಾತ್ರಿ ನಿದ್ದೆಯಾದರೂ ಆ ದಿನ ಯಾವ ಹೋಟೆಲಿನಲ್ಲಿ ಅಥವಾ ಕಾಡಿನಲ್ಲಿ ಎಂಬುದೂ ನನಗೆ ಮೊದಲೇ ಗೊತ್ತಿರುತ್ತದೆ. ಅಂಥದ್ದರಲ್ಲಿ ಅದೆಲ್ಲೋ ಕಾಡಿನಲ್ಲಿ ತುರ್ತು ಕರೆಯೊಂದರ ಕಾರಣ ಕಣ್ಮರೆಯಾಗಿದ್ದವನಿಗೆ ನಿನ್ನಿಂದ ಬಂದ ತುರ್ತು ಕರೆಯೊಂದು ಏನೆಲ್ಲ ಮಾಡಿಬಿಟ್ಟಿತು.

ನಾನು ಮೊದಲೇ ನನ್ನ ಅತೀ ಸನಿಹದಲ್ಲಿರುವ ಬಂಧುಗಳಿಗೆ ಕನಿಷ್ಠ ನನ್ನ ಮುಂದಿನ ಒಂದು ವಾರದ ದಿನಚರಿಯ ವಿವರ ತಿಳಿಸಿರುತ್ತೇನೆ. ಅವರಲ್ಲಿ ನೀನೂ ಸೇರಿಕೊಂಡು ಬಹಳ ದಿನಗಳಾದವಲ್ಲವೇ! ಇತ್ತೀಚೆಗೆ ನೀನು ಯಾವಾಗಲೂ ನಾನು ನಿನಗೆ ಎಷ್ಟು ಹತ್ತಿರವಿರುವೆ? ಎಂಬ ಪ್ರಶ್ನೆ ಪದೇ ಪದೇ ಕೇಳಿ ಖಾತರಿ ಬೇರೆ ಮಾಡಿಕೊಂಡಿರುತ್ತೀ. ನನಗೂ ಅದೇ ಈರುಳ್ಳಿ ಸಿಪ್ಪೆ ಸುಲಿದು ಸುಲಿದು ಕೊನೆಗೆ ಮಧ್ಯದಲ್ಲಿ ಉಳಿಯುವ ಏಕೈಕ ಹಸಿರಿನ ಕೊಳವೆ ಒಳಗೆ ಇದ್ದೀಯ ಕಣೇ ಎಂದು ಹೇಳೀ ಹೇಳೀ ಸಾಕಾಗಿದೆ. ಅಷ್ಟು ಮನದಟ್ಟು ಮಾಡಿದರೂ ಹಠಕ್ಕೆ ಬಿದ್ದವಳಂತೆ ಆ ಕೊಳವೆಯಲ್ಲಿ ಎಗ್ಜಾಕ್ಟ್ಲೀ ಎಲ್ಲಿದ್ದೀನಿ ಹೇಳು ಮಾಮನ ಮಗನೇ ಅಂತ ಪೀಡಿಸುತ್ತೀ ಎಳೇ ಮಗುವಿನಂತೆ.

ಇಂತಿಪ್ಪ ನಿನಗೆ ನಾನು ಬೇರೆಲ್ಲರಿಗೆ ಹೇಳಿದಂತೆ ಈ ವಾರ ನಾನು ಕಾಡು ಹೊಕ್ಕು ವಾರದ ನಂತರ ಮರಳಿ ಬರುತ್ತೇನೆ ಅಷ್ಠೇ ಎಂದರೆ ಬಿಡುತ್ತೀಯಾ? ಯಾವ ಕಾಡು? ಅಲ್ಲಿ ಎಲ್ಲಿ? ಎಲ್ಲಿ ಊಟಮಾಡುತ್ತಿಯಾ? ಎಲ್ಲಿ ಮಲಗುತ್ತೀಯಾ? ಯಾಕೆ ಹೀಗೆ ಕಣ್ಮೆರೆಯಾಗುತ್ತೀಯಾ? ನಿನ್ನ ಮೊಬೈಲ್ ಯಾಕೆ ಬಳಸೊಲ್ಲ? ಎಂಬ ನಿನ್ನ ಪ್ರಶ್ನೆಗಳ ಎನ್ಕೌಂಟರ್ ಎದುರಿಸಿದ ಮೇಲೆಯೇ ತಾನೆ ನನ್ನ ಪಯಣದ ದಿನಗಳಿಗೆ ನಿನ್ನ ಒಪ್ಪಿಗೆಯ ಗ್ರೀನ್ ಸಿಗ್ನಲ್ ಸಿಗೋದು. ಹೀಗೆಲ್ಲ ನಿನಗೆ ವಿವರವಾಗಿ ತಿಳಿಸಿ ಒಪ್ಪಿಸಿ ಕಾಡಿನಲ್ಲಿ ಕಳೆದು ಹೋಗಿದ್ದವನಿಗೆ ಈ ಬಾರಿ ಯಾಕೋ ನನಗೇ ಅರಿಯದ ತಳಮಳ ಒಳಗೊಳಗೆ.

ನಾನು ಕಾಡಲ್ಲಿದ್ದರೂ ಅಲ್ಲಿ ಕಳೆಯುವ ಪ್ರತಿಯೊಂದೂ ಕ್ಷಣವೂ ಮ್ರುತ್ಯುವಿನ ಎದುರಿಗೆ ಎದೆಯೊಡ್ಡಿ ನಿಂತು ಸಾವಿನ ವೀರಮಾಲೆಯ ಧರಿಸಲು ತಲೆಯೊಡ್ಡಿ ಕಾಲವೇ ಚಲಿಸದೆ ನಿಂತಂತ ಅನುಭವದೊಳಗೆ ಸಿಕ್ಕಿಕೊಂಡಿದ್ದವನಿಗೆ ನಿನ್ನ ನೆನಪು ಮತ್ತೂ ಕಂಗೆಡಿಸಿತ್ತು. ನಾನು ಎಣಿಸಿದಂತೆ ಗಂಭೀರವಾದದ್ದು ಅಂಥದ್ದೇನು ಆಗದಿದ್ದರೂ ಯಾಕೋ ಮನಸ್ಸು ವಾರ ಪೂರಾ ಸರಿಯಿರಲೇ ಇಲ್ಲ. ನನ್ನೆಲ್ಲ ವೃತ್ತಿ ಸಂಭಂದಿಸಿತ ಪೂರ್ವಯೋಜಿತ ಭೇಟಿ,ಸಂಗ್ರಹ,ವಿನಿಮಯದ ಕೆಲಸ ಮುಗಿಸಿ ಅಂದು ರಾತ್ರಿ ಮುಂದಿನ ಊರಿಗೆ ಪಯಣ ಬೆಳೆಸುವವವಿದ್ದೆ. ಕಾಡು ಬಿಟ್ಟು ಹತ್ತಿರದ ಪಟ್ಟಣಕ್ಕೆ ನನ್ನ ಮುಂದಿನ ಪಯಣದ ಸಲುವಾಗಿ ಬಂದಿದ್ದೆ.

ಕಣ್ಮುಚ್ಚಿ ಮಲಗಿದ್ದ ನನ್ನ ಮೊಬೈಲ್ ಎಬ್ಬಿಸಿದ ತಕ್ಷಣವೇ ಒಳ ಬಂದದ್ದು ನಿನ್ನದೇ ನೂರೆಂಟ್ ಮೆಸೇಜ್ಗಳು. ನಾನು ಕಾಡಿನಲ್ಲಿದ್ದ ಪ್ರತೀ ದಿನದ ಬೆಳಗು ಮಧ್ಯಾಹ್ನ ರಾತ್ರಿಯ ಎಲ್ಲಾ ಸಮಯಗಳಲ್ಲಿ ನನ್ನ ಅತೀ ಅವಶ್ಯಕ ಜವಾಬ್ಧಾರಿಗಳನ್ನು ತಪ್ಪದೇ ನೆನಪಿಸಿದ್ದೆ. ಮರೆಯದೇ ನನ್ನ ಆರೋಗ್ಯದ ಬಗ್ಗೆ ಪ್ರತೀ ದಿನ ವಿಚಾರಿಸಿಕೊಂಡಿದ್ದೆ. ಎಲ್ಲವನ್ನೂ ಇನ್ನೂ ಓದಿ ಮುಗಿಸಿರಲೇ ಇಲ್ಲಾ. ಸರಿಯಾಗಿ ನೀನೇ ಕರೆಮಾಡಿದ್ದೆ. ನಿನ್ನ ಮಾತಿನಲ್ಲಿ ನನ್ನ ಆರೋಗ್ಯದ ಬಗ್ಗೆ ಇದ್ದ ಕಾಳಜಿ ಕಣ್ಣಿಗೆ ಕಟ್ಟಿದಂತೆ ವ್ಯಕ್ತವಾಗುತ್ತಿತ್ತು. ಅದೂ ಇದೂ ಒಂದು ವಾರದಿಂದ ಬಾಕಿ ಇದ್ದ ಎಲ್ಲಾ ವಿಷಯಗಳ ವರದಿ ಒಪ್ಪಿಸಿಬಿಟ್ಟಿದ್ದೆ.

ನಾನು ಏನೇ ಹೂ ಗುಟ್ಟಿದರೂ ನನ್ನ ಒಳ ಮನಸ್ಸಿನಲ್ಲಿದ್ದ ಕಳವಳ ಅರ್ಥವಾದವಳಂತೆ ಯಾಕೆ ಒಂಥರಾ ಇದ್ದೀರಾ, ಏನಾಯ್ತು? ಯಾಕೆ ಬಾಯ್ಬಿಟ್ಟು ಕೇಳ್ತಿಲ್ಲಾ? ಕೇಳೀ ಪ್ಲೀಸ್. ಮನಸ್ಸಿನಲ್ಲಿ ಏನನ್ನೂ ಇಟ್ಟುಕೋ ಬೇಡಿ ನೀವು ಕೊರಗೋದು ನೋಡೋಕಾಗುತ್ತಿಲ್ಲ, ನನಗೆ ಗೊತ್ತಾಗುತ್ತಿದೆ. ಬೇಗ ಹೇಳು ಬಾಬು ಎಂದಾಗ ನನಗೆ ಇನ್ನು ತಡೆಯದಾಗದೇ ಕೇಳಿಯೇ ಬಿಟ್ಟೆ. ಏನಾಯ್ತು ಹೇಳು? ಯಾಕೆ ನನ್ನಿಂದಾ ಏನನ್ನೋ ಮುಚ್ಚಿಡುತ್ತಿದ್ದೀಯಾ ಕೋತಿ? ಎಂದ ತಕ್ಷಣ ನಿನ್ನ ಧ್ವನಿ ಉಡುಗಿತ್ತು, ನೀನು ಅತ್ತಲಿಂದ ಅಳುತ್ತಿರುವ ಶಬ್ಧ ಕೇಳಿಸಿಕೊಳ್ಳದಾದೆ.

ಮುಂದೆ ನೀನು ನಡೆದದ್ದೆಲ್ಲಾ ವಿವರಿಸಿದ್ದೆ.ನಿನ್ನ ಪ್ರತಿಯೊಂದೂ ಖಾಸಗೀ ವಿಷಯಕ್ಕೆ ಧಕ್ಕೆ ಮಾಡಿದವನ ವಿವರಗಳನ್ನು ನೀನು ನೀಡುತ್ತಿದ್ದರೇ ನಾನಾಗಲೇ ನನ್ನ ಮುಂದಿನೂರಿನ ಪಯಣವನ್ನು ರದ್ದುಪಡಿಸಿದ ವಿವರವಾದ ಈಮೈಲ್ ನಿನಗೇ ಗೊತ್ತಿಲ್ಲದಂತೆ ರವಾನಿಸಿದ್ದೆ. ನನ್ನ ಅಂದಿನ ರಾತ್ರಿಯ ಪಯಣದ ಸುಖಕರ ಪಯಣದ ವ್ಯವಸ್ಥೆ ನನ್ನ ಮೊಬೈಲಿನ ಎಸ್ ಎಮ್ ಎಸ್ ನಲ್ಲೇ ಮಾಡಿ ಮುಗಿಸಿದ್ದೆ. ನಿನ್ನ ಕಥೆ ಮುಗಿಸಿದವಳಿಗೆ ನಾನು ಹೇಳಿದ್ದೆ ನಾಳೆ ಬೆಳಗ್ಗೆ ನಿನ್ನೊಂದಿಗಿರುತ್ತೇನೆ ಮತ್ತು ಆ ಎಲ್ಲಾ ಸುರಕ್ಷತಾ ವಿಧಿವಿದಾನಗಳನ್ನು ಮರು ಪರಿಶೀಲಿಸಿ ನಿನ್ನೆಲ್ಲ ಭಯಗಳನ್ನೂ ನಿವಾರಿಸಿರುತ್ತೇನೆ ಎಂದಿದ್ದೆ.

ನಿನಗಂತೂ ನಂಬಲೂ ಆಗದ ಬಿಡಲೂ ಆಗದ ಪರಿಸ್ಥಿತಿ. ನನ್ನಲ್ಲಿ ನೀ ಅದೆಷ್ಟು ಬೇಡಿಕೊಂಡಿದ್ದೆ ಇದನ್ನೆಲ್ಲಾ ನಾನೇ ನಿಭಾಯಿಸುತ್ತೇನೆ ನೀವೇನು ಬರುವುದು ಬೇಡವೆಂದಿದ್ದೆ. ಆದರೂ ನಾನು ನಿನಗೇ ತಿಳಿಸದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಾಗಿತ್ತು. ಆ ರಾತ್ರಿ ಪೂರಾ ನನ್ನ ಪ್ರತೀ ಕ್ಷಣಗಳಲ್ಲಿ ನೀನಿದ್ದೆ. ನನ್ನ ಮೊಬೈಲ್ ತನ್ನ ಕೊನೆಯುಸಿರು ಬಿಡುವತನಕವೂ ನಮ್ಮಿಬ್ಬರ ಮಾತುಕಥೆ ಸಾಗಿತ್ತು. ಬೆಳಗ್ಗೆ ಬೆಳಗ್ಗೆ ನಮ್ಮ ಮನೆಯ ಮುಂದಿದ್ದೆ. ಎಂದೆಂದೂ ತೆರೆದಿಟ್ಟಿರದ ಮೊದಲ ಗೇಟ್ ಓಪನ್ ಇತ್ತು. ಅದಕ್ಕೂ ಮುಂದೆ ನಾನು ಕಾಲಿಡಲು ಆಗದಂತೆ ನೀನು ಬಿಟ್ಟಿದ್ದ ಬಣ್ಣ ಬಣ್ಣ ತುಂಬಿದ ಹಸೀ ಹಸೀ ರಂಗೋಲಿ ನೆಲದ ಮೇಲೆ ನಗುತ್ತಾ ಸುಸ್ವಾಗತ ಹೇಳಿತ್ತು.

ನನ್ನ ಶೂ ಕಳಚಿದವನಿಗೆ ಆಗಿನ್ನ ನೀರಿನಲ್ಲಿ ತೊಳೆದು ಶುಧ್ಧವಾಗಿದ್ದ ನೆಲದ ಮೇಲೆ ನಡೆದು ನನ್ನ ಪಾದ ನೆನೆಯಬಾರದೆಂಬಂತೆ ಮೊದಲೇ ಯೋಚಿಸಿ ನೀನು ಒಣ ಬಟ್ಟೆಯೊಂದ ನೆಲಕ್ಕೆ ಹಾಸಿದ್ದೆ. ಮನೆಯ ಹೊಸಿಲು ದಾಟಿ ಒಳಗೆ ಹೆಜ್ಜೆ ಇಟ್ಟು ಅಲ್ಲೆ ಕದದ ಹಿಂದೆ ಕಾದು ನಿಂತಿದ್ದ ನಿನ್ನನ್ನು ನೋಡಿದವನಿಗೆ ಸೋಜಿಗವೊಂದು ಕಾದಿತ್ತು. ನಾನು ತುಂಬಾ ಇಷ್ಟ ಪಡುವ ಅದೇ ನವಿಲು ನವಿಲು ಬಣ್ಣಗಳ ಸೀರೆಯಲ್ಲಿ ಕೆತ್ತಿದ ಶಿಲ್ಪದಂತೆ ನಿಂತಿದ್ದೆ. ನಿನಗೆ ಅಲುಗಾಡಲೂ ಆಗದಂತೆ ಸ್ತಭ್ಧಳಾಗಿದ್ದೆ. ಯಾಕೋ ನನಗೆ ಮನಸ್ಸಿನೊಳಗೆ ಉಕ್ಕಿ ಬಂದ ಎಲ್ಲಾ ಭಾವನೆಗಳ ಅಲೆಗಳನ್ನೂ ಅದುಮಿಟ್ಟು ಅಲ್ಲೇ ಪಕ್ಕದ ಸೋಫಾದಲ್ಲಿ ಕುಳಿತುಕೊಂಡೆ.

ಮುಂದುವರಿಯಲಿದೆ….

???????????????????????????????

ಅದೇ ಮಲ್ಲಿಗೆ ಬಳ್ಳಿ, ಅದೇ ಹೂ ಹುಡುಗನ ನನಸು.

ಆ ದಿನವೇ ನೆನಪಾಗುತ್ತೆ, ಮತ್ತೆ ಮತ್ತೆ ಬೇಡವೆಂದರೂ, ಬೇಕೆಂದರೂ.ನನ್ನ ನಿನ್ನ ನಡುವೆ ಮಲ್ಲಿಗೆ ಬಳ್ಳಿಯೊಂದು ಹುಟ್ಟಿತ್ತು, ಹಬ್ಬಿತ್ತು, ಹೂ ಬಿಟ್ಟಿತ್ತು. ನಾನೂ ಅದೇ ಮಲ್ಲಿಗೆ ಹೂಗಳ ಬೊಗಸೆ ತುಂಬಾ ತಂದು ನಿನ್ನ ಮುಡಿತುಂಬಾ ಮುಡಿಸುವ ಕನಸು ಕಂಡಿದ್ದೆ. ಆ ಸುದಿನ ಅದೆಷ್ಟು ಬೇಗನೆ ಬಂದಿತ್ತು. ಇಬ್ಬರಲ್ಲೂ ಒಬ್ಬರನ್ನೊಬ್ಬರು ಕಣ್ತುಂಬಾ ನೋಡುವ ಕಾತುರ. ಇಬ್ಬರೂ ಒಪ್ಪಿ ಕೆಲವು ನಿಮಿಷಗಳ ಭೇಟಿಯಿದ್ದುದನ್ನು ಮತ್ತೆ ಘಂಟೆಗಳಾಗಿ ಬದಲಾಯಿಸಿಕೊಂಡಿದ್ದೆವು. ನಾನು ನಿನ್ನ ನೋಡುವ ದಾರಿ ಹಿಡಿಯುವ ಮುನ್ನ ನನ್ನ ಮೊದಲ ಹೆಜ್ಜೆಯಿಟ್ಟದ್ದನ್ನು ನಿನಗೆ ತಿಳಿಸಿದ್ದೆ. ನೀನೂ ನಿನ್ನೆಡೆಗಿನ ನನ್ನ ಪಯಣಕ್ಕೆ ಶುಭ ಕೋರಿದ್ದೆ.ಅವತ್ತೂ ನಮ್ಮ ಸುತ್ತ ಮುತ್ತ ಜನರ ಭಯ, ಭೀತಿ,ನಿರಾಸೆ,ಸಾವಿನ ನೆಪ,ಕಳೆದು ಹೋಗುವ ಚಿಂತೆ, ಹೀಗೆ ನೂರೆಂಟು ಮಾಮೂಲಿಯಲ್ಲದ ರಗಳೆಗಳೇ ಇದ್ದವು. ಆದರೂ ಇವೆಲ್ಲದರ ಮಧ್ಯೆ ನಾವಿಬ್ಬರು ಮಾತ್ರ ಸಿಗುವ, ಸೇರುವ, ಖುಷಿಪಡುವ,ಹಂಚಿಕೊಳ್ಳುವ,ಒಂದಾಗುವ,ನಿರೀಕ್ಷೆ, ತವಕದಲ್ಲಿದ್ದೆವು.

ಅದೇ ಹೋಟೆಲ್ಲು. ಅದೇ ಜಾಗ.ಮೊನ್ನೆ ಹೋಗಿದ್ದೆ. ನಮ್ಮ ನಡುವೆ ನಡೆದ ಮೊದಲ ಭೇಟಿಯ ದಿನ ನೆನಪಾಯ್ತು. ನಾನು ಅಲ್ಲಿ ತಲುಪುತ್ತಿರುವ ಸುದ್ದಿ ಪ್ರತಿಕ್ಷಣ ನಿನ್ನ ಫೋನಲ್ಲಿ. ನಾನು ಇಳಿದವನೇ ನನ್ನ ಮಾಮೂಲಿ ಹವ್ಯಾಸದಂತೆ ಮೊದಲು ಕೂರುವ ಜಾಗ ಹುಡುಕಿದೆ. ಅದೇ ಟೇಬಲ್ಲಿಗೆ ನನ್ನ ಸಿಬ್ಬಂದಿಗೆ ಕಣ್ಣ ಸನ್ನೆಯಲ್ಲೇ ಹೇಳಿ ರಿಸೆರ್ವ್ ಮಾಡಿಸಲು ತಿಳಿಸಿದೆ. ಆಚೆ ನಿಂತು ನಿನ್ನ ಬರುವಿಗೆ ಕಾದಿದ್ದೆ. ನೀನು ಆಟೋ ಇಳಿದೆ. ಕೈಯಲ್ಲಿ ಸತತವಾಗಿ ವರದಿ ಮಾಡುತ್ತಿದ್ದ ಅದೇ ಮೊಬೈಲು ಹುಡುಗಿಯ ನೋಡಿ ಹಿಂತಿರುಗಿ ಹೋಟೆಲ್ ದ್ವಾರದ ಬಳಿ ನೋಡಲು ತಿಳಿಸಿದೆ. ತಿರುಗಿ ನೋಡಿದ ನೀನು ನಕ್ಕು ಮೊಬೈಲ್ ಆಫ್ ಮಾಡಿದೆ.

ಇಬ್ಬರೂ ಒಳ ನಡೆದೆವು. ಮತ್ತವರೆಲ್ಲ ಅದೇ ಹೋಟೆಲ್ಲಿನ ಅಲ್ಲಲ್ಲಿ ಆಸೀನರಾದರು. ನಮ್ಮ ಟೇಬಲ್ಲಿಗೆ ಮಾತ್ರ, ಸುತ್ತ ಮುತ್ತ ಯಾರೂ ಕುಳಿತುಕೊಳ್ಳದ ವ್ಯವಸ್ಥೆಯಾಗಿದ್ದು ನಿನಗೆ ಗೋಚರಿಸಲೇ ಇಲ್ಲ. ಯಾಕೆಂದರೆ ನೀನು ನಿನ್ನ ಮೊಬೈಲಿನಲ್ಲಿ ಮುಳುಗಿಹೋಗಿದ್ದೆ. ಮುಂದೆ ನಡೆದಿದ್ದೆಲ್ಲವೂ ಇಬ್ಬರಿಗೂ ಒಬ್ಬರಿಗೊಬ್ಬರು ಸಹಾಯ ಮಾಡುವ ಕೊಡು ಕೊಳ್ಳುವ ಸಹಜ ಕ್ರಿಯೆಗಳು. ನನ್ನಲ್ಲಿದ್ದದ್ದನ್ನು ನಿನಗೆ ಕೊಟ್ಟೆ. ನೀನು ಪ್ರೀತಿಯಿಂದ ಬರೆದದ್ದೆನ್ನಲ್ಲಾ ಅದೇ ಚೆಂದದ ಮರು ಬಳಕೆಯ ಕಾಗದದ ಚೀಲದಲ್ಲಿ ಕೊಟ್ಟೆ. ನಿನ್ನ ಆ ಒಂದು ಪುಸ್ತಕ ಮಾತ್ರಾ ಇರಲಿಲ್ಲ ಅದರಲ್ಲಿ. ಅದಕ್ಕಾಗಿ ನೀನೆಷ್ಟು ಶ್ರಮಪಟ್ಟು ಅದರದೊಂದೂ ಪ್ರತಿ ನಿನ್ನ ಬಳಿ ಉಳಿಸಿಕೊಳ್ಳಲಾಗದ ಅಸಹಾಯಕತೆ ತೋಡಿಕೊಂಡೆ.

ಇಬ್ಬರ ಬಳಿಯೂ ಕುಳಿತುಕೊಳ್ಳಲೂ, ಸುಮ್ಮ ಸುಮ್ಮನೇ ಹರಟಲೂ ಸಮಯವೇ ಇರಲಿಲ್ಲ.ಪ್ರೀತಿಯೊಂದು ಕಳೆದುಹೋದದ್ದರ ಚಿಂತೆಯ ನಿನ್ನ ಕಣ್ಣಿರ ನಡುವೆ ನೀನಿದ್ದೆ, ಜೊತೆಯಲ್ಲಿ ನಾನೂ ಇದ್ದೆ. ನಿನ್ನ ನಿಜದ ರೂಪ ಅಂದು ಅರಿತ ನಾನು, ನನ್ನ ಜೀವಕಣಗಳ ಮತ್ತೊಂದು ಭಾಗದ ಪ್ರತಿರೂಪ ಅಲ್ಲೇ ಕಂಡು, ಜೋಡಿಸಿಕೊಂಡಿದ್ದೆ. ತದನಂತರ ನಾವಿಬ್ಬರೂ ಮತ್ತೆಂದೂ ಬೇರಾಗದ ಮಾತು ಇಬ್ಬರೂ ಶಪಥಗೈದಿದ್ದು ಎಲ್ಲ ಮನದೊಳಗೆ ಮತ್ತೆ ಮತ್ತೆ ಮರುಕಳಿಸಿದೆ. ನಂತರ ನಡೆದ ಭೇಟಿಗಳೆಷ್ಟೋ, ಮಾತುಕಥೆಗಳೂ ಲೆಕ್ಕಕ್ಕೆ ಸಿಗದಷ್ಟು, ಮತ್ತು ಮೌನದ ನಿಟ್ಟುಸಿರುಗಳೂ ಹಿಡಿದಿಡಲಾಗದ ಬೆಳಕಿನಷ್ಟು. ಇಬ್ಬರೂ ಜೊತೆ ಜೊತೆ ನಡೆದ ಹೆಜ್ಜೆಗಳೆಷ್ಟೋ, ಲೆಕ್ಕವಿಟ್ಟವರಾರು,ನೆನಪುಗಳ ಖಾಲಿ ಖಾಲಿ ಪುಟಗಳಿಗೆ ದಿನಾಂಕ ಬರೆದು ಮೊಳೆಯೊಡೆದು ತಗುಲಿಹಾಕಿದವರಾರು.
****
ಇಂದೂ ಅದೇ ರೀತಿಯ ಸಮಯ. ನಿನ್ನಲ್ಲಿ ನೀನು ಕಳೆದುಕೊಂಡಿದ್ದೆಷ್ಟೋ, ಹಾಗೇ ನಾನೂ ಕೂಡ. ಇಬ್ಬರೂ ಸಾಕಷ್ಟು ಗಳಿಸಿರಬಹುದು ಜನರ ಕಣ್ಣಿಗೆ ಕಾಣುವಂತೆ. ಆದರೆ ಒಳಗೆ ಕಳೆದುಕೊಂಡಿರುವುದು ನಮ್ಮಿಬ್ಬರ ಮನಸ್ಸಿಗೆ ಮಾತ್ರಾ ಗೊತ್ತು ಅಲ್ವಾ.ಆ ದಿನದಿಂದ ನಾವಿಬ್ಬರೂ ಜೀವಿಸಿದ ನಮ್ಮ ಪ್ರತೀ ಕ್ಷಣಗಳ ಕಿವಿಗಳಿಗೆ ನಮ್ಮ ತೊಳಲಾಟ, ನಿಟ್ಟುಸಿರುಗಳ ಬಿಸಿಯ ಬೇಗೆ ಕೇಳಿಸಿದೆಯಂತೆ. ಹೊರಗೆ ನೋಡಲು ಇಬ್ಬರೂ ಮಾಮೂಲಿಯಂತೆ ಕಂಡರೂ ಒಳಗೊಳಗೆ ಪ್ರತೀ ಕ್ಷಣ ಹಂಚಿಕೊಂಡ ಎಲ್ಲ ಭಾವನೆಗಳು ನಿಗಿ ನಿಗಿ ಕೆಂಡದ ಉಂಡೆಗಳಾಗಿ ಸುಡುತ್ತಿರುವುದರ ಶಾಖ ನಮಗೆ ಮಾತ್ತ ಅರಿವಾಗುತ್ತಿದೆಯಲ್ಲವೇ. ನಿನ್ನ ಪ್ರತೀ ಅಕ್ಷರ, ನಮ್ಮಿಬ್ಬರ ನಡುವೆ ನಡೆದ ಎಲ್ಲ ಮಧುರ, ಅಮಧುರ ಅನುಭವಗಳ ದಾಖಲಾತಿಯಲ್ಲದೆ ಮತ್ತೇನು ಗೆಳತಿ.

“ಲೈಫ್ ಬಾಯ್” ಎಲ್ಲಿದೆಯೋ ಅಲ್ಲಿದೇ ಆರೋಗ್ಯ, ಎಂಬ ಹಳೇ ಇಟ್ಟಿಗೆಯಂಥ ಎಷ್ಟು ಹಚ್ಚಿದರೂ ಸುಲಭಕ್ಕೆ ಸವೆಯದ ಚಿರ ನೆನಪಿನ ಸೋಪಿನ ಹಾಡು ನನ್ನ ಯೂ ಟೂಬಿನಲ್ಲಿ ನೋಡುತ್ತಿರುವೆ ಈಗ. ನನಗನ್ನಿಸುತ್ತೆ “ಪ್ರೀತಿ ಎಲ್ಲಿದೆಯೋ ಅಲ್ಲಿದೇ ತಾಪ” ಅಂತಾ. ಇಬ್ಬರಿಗೂ ಇದನ್ನು ವಿವರಿಸ ಬೇಕಿಲ್ಲ ಅಲ್ಲವೇ. ಇಬ್ಬರೂ ಅನುಭವಿಸಿರುವ ಸಮಾನ ಸುಖವಿದು. ನಿನಗೆ ನಿನ್ನದೇ ಒಲವಿನ ನೀರುಣಿಸುವ ಝರಿ ತೊರೆಗಳು, ನನಗೆ ಭಾವವೂ ಇಲ್ಲದ, ನಿರ್ಭಾವದ ಅರಿವೂ ಇಲ್ಲದ ನೀನಿಲ್ಲದ ಕೊರತೆಗಳು ಮಾತ್ರ ಸಾಗರದಷ್ಟಿವೆ. ಈ ಬದುಕೇ ಹಾಗಲ್ಲವೇ. ಒಮ್ಮೆ ಬಿಟ್ಟು ಇರಲಾರೆ ಎನ್ನಿಸುವುದು ಮತ್ತೊಮ್ಮೆ ಯಾಕೋ ಇದು ಅತೀ ಎನಸುವುದು ಸಹಜವೂ ಕೂಡ.

ಹಾಗೆ ಆದಾಗಲೇ ಎಲ್ಲವೂ ಒಂದು ಹಂತ ಮೀರಿ ಮೇಲಕ್ಕೋ ಕೆಳಕ್ಕೋ ಏರುವುದೋ ಇಳಿಯುವುದೋ ತೋರಿಸುವ ಬದುಕಿನ ಸಹಜ ಗ್ರಾಫಿನ ಪುಟದಂತಾಗುವುದು. ಯಾವುದೇ ಜೀವನ ಸರಳ ರೇಖೆಯಂತಿರುವುದು ನಿನ್ನ ಅಷ್ಟೂ ಓದಿನ ತಿಳುವಳಿಕೆಯಲ್ಲಿ ಕಂಡಿದ್ದರೆ ಈ ಬಾರಿ ಬಂದಾಗ ಮರೆಯದೆ ತಿಳಿಸು. ನಾನು ನಿನ್ನನ್ನೂ ನೀನು ನನ್ನನ್ನೂ ಎಲ್ಲಾದರೂ ಎಂದಾದರೂ ಯಾವ ಕ್ಷಣದಲ್ಲಾದರೂ ಒಮ್ಮೆಯಾದರೂ ಬಿಟ್ಟು ಬದುಕಿದ ಸಾಧ್ಯತೆ ಇದೆಯೇ ಗೆಳತಿ? ನನಗಂತೂ ನೂರಕ್ಕೆ ನೂರೂ ಖಾತರಿ, ಅದು ಸಾಧ್ಯವಾಗುವುದೂ ಇಲ್ಲ ಯಾರು ಬೇಕೆಂದರೂ ಬೇಡವೆಂದರೂ.
****
ನಮ್ಮಿಬ್ಬರ ಜೀವಿಸಿದ ಪ್ರತೀ ಕ್ಷಣಗಳ ದಾಖಲಾತಿ ನಮ್ಮ ಮನದಲ್ಲಿ ಅಚ್ಚಳಿಯದೇ ನಡೆದಿರುವಂತೆ ಸಮಾನಾಂತರವಾಗಿ ನಮ್ಮಿಬ್ಬರ ನಡುವೆ ನಡೆಯುತ್ತಿರುವ ಎಲ್ಲ ಪ್ರಾಪಂಚಿಕ ಅನುಭವವೂ ನಮಗೇ ತಿಳಿಯದಂತೆ ಯಾಂತ್ರಿಕವಾಗಿಯೂ ದಾಖಲಾತಿ ನಡೆದಿದೆ. ನಾವಿಬ್ಬರೂ ಬಾಯಿ ಬಡಿದುಕೊಳ್ಳುವುದರಲ್ಲಿ ನಿಸ್ಸೀಮರು ಎಂದೇ ಹೇಳಬೇಕಾಗಿದೆ ಈಗ. ಈ ವಿಷಯದಲ್ಲಿ ನೀನೇ ಮೊದಲು ಮತ್ತು ನನಗಿಂತ ತುಂಬಾ ಮುಂದು ಕೂಡಾ. ಅದೆಷ್ಟು ತವಕ ನಿನಗೆ, ನಡೆದದ್ದನೆಲ್ಲ ಬರೆದೋ, ಕಿವಿ ಕಚ್ಚಿಯೋ ಜಗಜಾಹೀರು ಮಾಡುವ ಮಗುವಿನ ಮನಸ್ಸು ನಿನ್ನದು.

ನಮ್ಮಿಬ್ಬರಲ್ಲಿ ಯಾರು ಭೌತಿಕವಾಗಿ ಇಲ್ಲವಾದರೂ ನಮ್ಮ ನಡುವೆ ನಡೆದ, ನಮ್ಮಿಬ್ಬರ ಸುತ್ತಮುತ್ತ ಇರುವ ಜನರೊಂದಿಗೆ ನಡೆದ ಪ್ರತಿಯೊಂದೂ ಕ್ಷಣದ ಮಾಹಿತಿ ಜಗ ಜಾಹೀರಾಗುವುದಂತೂ ತಪ್ಪುವುದಿಲ್ಲ. ನಮ್ಮ ಕೈ ಕೈಹಿಡಿದು ನಾವಿಬ್ಬರೂ ನಡೆದಾಡಿದ, ಸವೆಸಿದ ಪ್ರತೀ ಹೆಜ್ಜೆಯೂ, ಚೌಕಿಯಲ್ಲಿರುವ ದಾರಿ ದೀಪದ ಮೇಲಿರುವ ಯಾಂತ್ರಿಕ ಕಣ್ಣುಗಳಲ್ಲಿ ಧಾಖಲಿದೆ. ನಮ್ಮ ಖಾಸಗೀತನದ ಖಾಸ್ ಬಾತ್ ಗಳೂ ಯಾವಾಗ ಬೇಕೆಂದಾಗ ಕೇಳಬಹುದು. ನಮ್ಮೆಲ್ಲರ ಖಾಸಗಿ ಬದುಕೂ ಇಂದು ಬೆಳಕಿನಷ್ಟು ಬೆತ್ತಲೆ, ಬೆತ್ತಲೆ. ಅದೆಷ್ಟು ಕಷ್ಟ ಪಟ್ಟು ಸೊಳ್ಳೆಪರದೆಯಲ್ಲಿ ನೀರು ತುಂಬಿಡಲು ಪ್ರಯತ್ನಿಸುತ್ತಾರೆ ಬುಧ್ದನಷ್ಟೇ ಬುದ್ದಿಯುಳ್ಳ ಜನ. ಇಂದು ನಮ್ಮ ಕತ್ತಲೆಯ ಬದುಕು ಮುಚ್ಚಲಾರದ ಲಕ್ಷಾಂತರ ತೂತುಗಳ ತೂತು ಬಿದ್ದ ಸೊಳ್ಳೆಪರದೆಯಿದ್ದಂತೆ.

****
ಪ್ರೀತಿ ಹುಟ್ಟಬೇಕು ಎರಡು ಮನಗಳ ನಡುವೆ. ಅದಕ್ಕೆ ಯಾರಪ್ಪನ ಅಪ್ಪಣೆಯೂ, ಅನುಮತಿಯೂ, ಅಂಗೀಕಾರವೂ,ರಾಜನ ಒಪ್ಪಿಗೆಯ ಗೊಡವೆಯೂ ಇರಬೇಕಿಲ್ಲ, ಅವನ ಆಸ್ಥಾನದ ರಾಜ ಮುದ್ರೆಯೂ ಬೇಕಿಲ್ಲ. ಪ್ರೀತಿಸುವ ಮನಸ್ಸುಗಳ ನಡುವೆ ಯಾವ ಕಾಲದ, ವಯದ, ನಿರೀಕ್ಷೆಯ, ಅಡೆ ತಡೆಯ ಗೋಡೆಗಳೂ, ಕೋಟೆಗಳೂ, ಮುಚ್ಚಿದ ಬಾಗಿಲುಗಳೂ, ಬೀಗ ಜಡಿವ ಜನರೂ ಯಾವ ಕಾಲದಲ್ಲೂ ಇರಬಾರದು.

ಹಾಗೇ ಮತ್ತೆ ನಾವು ಸಂಧಿಸುವ ಕಾಲ ಬಂದಿದೆ. ನಡುವೆ ಸಾಕಷ್ಟು ದಾರಿ ಸವೆದಿದೆ. ನಾನೂ ನೀನೂ ಅದೇ ದಾರಿಯ ಮಗ್ಗುಲಿನಲ್ಲಿ ನಡೆದದ್ದೂ ಮುಗಿದಿದೆ. ಇಬ್ಬರಿಗೂ ನಡುವೆ ವಿಷಹಿಣಿದ ಜನರ ವರ್ತನೆಗಳೂ ಅರ್ಥವಾಗಿದೆ. ಅದೆಲ್ಲ ಸಹಜವೆಂಬ ಅರಿವೂ ನಮ್ಮಿಬ್ಬರಿಗೂ ಯಾವತ್ತೂ ಇದೆ. ಮಾತೆತ್ತಿದರೆ ಅಲ್ಲಮ, ಅಕ್ಕ, ಬುಧ್ದನ ಹೆಸರಿಡಿದೇ ಮಾತನಾಡುವ ಜನರ ನಡುವೆ ಬದುಕಿ ಉಸಿರಾಡುವ ನಾವುಗಳು ಮತ್ತೆ ನಾವಿಬ್ಬರು ನಡೆದ ಅದೇ ಮುಖ್ಯದಾರಿಗೆ ಬರಲಿಕ್ಕಿದೆ. ಅಂದಿನಿಂದ ಇಲ್ಲಿಯವರೆಗೆ ಮಲ್ಲಿಗೆ ಬಳ್ಳಿಯೂ ಹೆಚ್ಚು ಹೆಚ್ಚು ಹಬ್ಬಿದೆ. ಕೈತುಂಬಾ ಮಲ್ಲಿಗೆಯಿಡಿದು,ಮೊಳಗಟ್ಟಳೆ ಮನಸಾರೆ ಪೋಣಿಸಿ, ನಿನ್ನ ಮುಡಿಯೇರಿಸುವ ಸಮಧುರ ಕ್ಷಣಗಳು ಆದಷ್ಟೂ ಬೇಗ ಬರಲಿ ಎಂಬ ನಮ್ಮಿಬ್ಬರ ಕನಸು ನನಸಾಗಲೀ. ಎಂದೆಂದೂ ಅದೇ ಹಾರೈಕೆಗಳೊಂದಿಗೆ ನಿನ್ನ ಅದೇ ಎಂದೂ ಬದಲಾಗದ ಹೂ ಹುಡುಗ.

ಇಂತಿ ನಿನ್ನ
ಅನ್ ಲಿಮಿಟೆಡ್ ಪ್ಲಾನ್ ನ ಫೋನ್ ಗೆಳೆಯ,
@ 9-30-60-90-420.

hacked-thieves-bypass-lock-screen-your-samsung-galaxy-note-2-galaxy-s3-more-android-phones.1280x600

491 ರಿಂದ 461 ರ ವರೆಗಿನ ಪಯಣ….

ನಿನ್ನ ಮಿಸ್ಸಡ್ ಕಾಲ್ ಮತ್ತೊಮ್ಮೆ ಈ ನಂಬರ್ರಿನ ಬಾಗಿಲಿಗೆ ಬಂದು ಕದ ಬಡಿದೀತೇನೋ! ಅಥವಾ “ಕಾಲ್ ಮಾಡೋ ಕೋತಿ” ಎಂಬ ಪುಟಾಣಿ ಎಸ್ಸೆಮ್ಮೆಸ್ ನನ್ನ ಇನ್ ಬಾಕ್ಸಿನೊಳಗೆ ಬಂದು ಇಣುಕಿನೋಡುವುದೇನೋ

ಓ ಮೈ ಗಾಡ್, ನಾನು, ನನ್ನ ಬದುಕು, ನನ್ನ ವಯಕ್ತಿಕ ತಿಕ್ಕಲುತನಗಳು, ನನ್ನ ಸುತ್ತಲಿನ ಪ್ರಪಂಚ ಮತ್ತೆ ಅದರಲ್ಲಾಗುತ್ತಿರುವ ಬದಲಾವಣೆಗಳಿಗೆ ನಾನು ಸ್ಪಂದಿಸೋ ರೀತಿ ನೋಡಿ ನೀನು ನಗುತ್ತಿರಬಹುದಲ್ಲವೇ ಮಾರಾಯ! ಅದೊಂದು ನನ್ನೊಳಗೆ ನಾನೇ ನಡೆದು ಸವೆಸಿದ ಸುಧೀರ್ಘ ಪಯಣವಲ್ಲದೇ ಮತ್ತೇನು? ಅದೊಂಥರಾ ಪ್ರವಾಸ ಮಾಡಿ ಮತ್ತೊಮ್ಮೆ ಹಿಂದಿರುಗಿ ನಿಂತು ನೋಡಿದ ಆತ್ಮೀಯ ಅನುಭವ ಅಲ್ವಾ!

ಆ ದಿನಗಳೂ ಇದ್ದವು ನನ್ನ ಬದುಕಿನಲ್ಲಿ. ಅಪ್ಪ ಅಮ್ಮ ನಮ್ಮನೆ ಹಬ್ಬಕ್ಕೆ ನೆಂಟರನ್ನು ಕರೆಯೋ ಕರ್ತವ್ಯ ನನಗೊಪ್ಪಿಸಿ ಬಿಡುತ್ತಿದ್ದರು. ನಾನು ಒಂದು ವಾರದ ಮುಂಚೆ “15 ಪೈಸೆ ಕಾಗದ”ದಲ್ಲಿ ನಮ್ಮ ಬಂಧು ಬಾಂಧವರಿಗೆಲ್ಲ ಪತ್ರ ಬರೆಯುತ್ತಿದ್ದೆ. ಅವರೂ ತಪ್ಪದೇ ಬರುತ್ತಿದ್ದರು. ಹಬ್ಬವೂ ಸಡಗರದಿಂದ ಮುಗಿದು ಮರೆಯಾಗುತ್ತಿತ್ತು ಕೆಲ ಸವಿ ನೆನಪುಗಳೊಂದಿಗೆ. ಇಷ್ಟೇ ನನ್ನ ಆ ಜೀವನದ ಹೊರ ಪ್ರಪಂಚದ ಸಂಪರ್ಕದ ಕೊಂಡಿಯ ಅವಶ್ಯಕತೆ ಇದ್ದಿದ್ದು.

ಮನೆಗೆ ಇದ್ದಕ್ಕಿದ್ದ ಹಾಗೆ “ಸ್ಥಿರ ದೂರವಾಣಿ”ಯೊಂದು ಬಂತು. ಸುತ್ತಲಿನ ಜನಕ್ಕೆ ಅದಿಲ್ಲದೆ ಬದುಕೇ ಇಲ್ಲವೇನೋ ಅನ್ನಿಸಿದಾಗ ನಮಗೂ ಅದು ಬೇಕೆನಿಸಿತೇನೋ! ಅಥವಾ ಸಂಭಂದಿಗಳು ದೂರ ದೇಶಕ್ಕೆ ಹಾರಿದ ಪ್ರಯುಕ್ತ ಅವರ ಯೋಗ ಕ್ಷೇಮ ವಿಚಾರಿಸಲು ಇರಬೇಕು ಅನ್ನಿಸುತ್ತೆ. ಅಲ್ಲದೇ ಪತ್ರಮುಖೇನ ವ್ಯವಹರಿಸಿ ತಿಂಗಳುಗಟ್ಟಲೆ ಕಾಯುವ ವ್ಯವಧಾನವಿಲ್ಲದೆ ಹಾಗೆ ಮಾಡಿದೆವೋ ಗೊತ್ತಿಲ್ಲ. ದೂರದ ದೇಶದಲ್ಲಿದ್ದ ಅಣ್ಣ ಮತ್ತು ಅಕ್ಕಂದಿರಿಗೆ ಇವತ್ತು ಟ್ರಂಕಾಲ್ ಬುಕ್ ಮಾಡಿ ಅದರ ಪಕ್ಕವೇ ಕುಳಿತು, ಮಲಗಿ, ಮಧ್ಯರಾತ್ರಿ ರಿಂಗಣಿಸಿದಾಗ ಮಲಗಿದ್ದವರೆಲ್ಲಾ ಎದ್ದು ಮಾತನಾಡಿದ ನೆನಪು ಇನ್ನೂ ಹಚ್ಚಹಸಿರು.

ಆಮೇಲೆ ನಾನೂ ವಿಶ್ವವಿದ್ಯಾಲಯಕ್ಕೆ ಸೇರಿದೆ. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಸಂಘದ ಕಾರ್ಯದರ್ಶಿಯಾದೆ. ಸಹಪಾಠಿಗಳ ಕಷ್ಟ ಸುಖ, ತೊಂದರೆ ನಿವಾರಣೆಗೆ ಕುಲಪತಿಗಳಿಂದ, ಮಂತ್ರಿಗಳಿಂದ ಹಿಡಿದು ಮುಖ್ಯಮಂತ್ರಿಗಳ ವರೆಗೂ ಓಡಾಟ ಶುರುವಿಟ್ಟುಕೊಂಡೆ. ವಿದ್ಯಾರ್ಥಿ ನಾಯಕತ್ವದ ಒಡನಾಟದ ಬಿರುಸಿಗೆ ನನ್ನ ಹಾಸ್ಟೆಲಿನ ಸ್ಥಿರ ದೂರವಾಣಿ ಬರೀ ರಾತ್ರಿ ಮಾತ್ರ ಉಪಯೋಗಕ್ಕೆ ಬರೋದ್ರಿಂದ “ಪೇಜರ್” ಎಂಬ ವಸ್ತು ನನ್ನ ಸೊಂಟದ ಪಟ್ಟಿಗೆ ನೇತುಹಾಕಿಕೊಂಡಿತು. ಅದರಲ್ಲೇ ಹೆಗ್ಗಡೆ,ಪಟೇಲರ,ಗೌಡರ ಪಕ್ಕ ಕುಳಿತಾಗಲೂ ಪೇಜರ್ನ ಬೀಪ್ ಶಬ್ಧಕ್ಕೆ ಮರು ಮೆಸ್ಸೇಜ್ ಕಳಿಸುವಷ್ಟು ಬ್ಯುಸಿಯಾದೆ. ಅದು ಕೆಲವೇ ತಿಂಗಳುಗಳಲ್ಲಿ ನನ್ನ ಬದುಕಿರಲಿ, ಭಾರತದಿಂದಲೇ ಇರಲೇ ಇಲ್ಲವೇನೋ ಎಂಬಂತೆ ಅಸ್ತಂಗತವಾಯ್ತು.

ನಾನೂ ವಿಶ್ವವಿದ್ಯಾಲಯದಿಂದ ಹೊರ ಬಂದ ಮಾರನೇ ದಿನವೇ ಮೊದಲೇ ಸಿಧ್ದವಿದ್ದ ಕೆಲಸಕ್ಕೆ ಸೇರಿಕೊಂಡಿದ್ದೆ. ಹುಡುಗು ವಯಸ್ಸಿಗೇ ಕೈತುಂಬಾ ಸಂಬಳ. ನನಗೂ ಮದ್ವೆ ಆಗೋಯ್ತು. ಆಮೇಲೆ ಬಂದಿದ್ದೇ ನನ್ನ ಮೊದಲ “ಜಂಗಮ ದೂರವಾಣಿ”. ಅದಕ್ಕೊಂದು ಸಂಖ್ಯೆ** ** ***491. ಈ ನಂಬರ್ ಪಡೆಯೋಕೆ ತಿಪಟೂರಿನ ಬಿ ಎಸ್ ಎನ್ ಎಲ್ ಆಫೀಸಿನ ಮುಂದೆ 2 ಮೈಲಿ ಕ್ಯೂ ನಿಂತಿದ್ದು ನೆನೆದರೆ ಈಗ ಮೈ ಜುಮ್ ಜುಮ್ ಎನ್ನುತ್ತೆ. ಅದರಲ್ಲೂ ನಾನು ನನ್ನ ಪರಿಚಯದವರ ಮೂಲಕ ಇದೇ ನಂಬರ್ ಬೇಕು ಎಂದು ಕೇಳಿ ಪಡೆದಿದ್ದೆ. ಕಾರಣ ಮಾತ್ರ ಸಕತ್ತು ಸೀಕ್ರೆಟ್. ನಮ್ಮಿಬ್ಬರಿಗೇ ಗೊತ್ತಿರಲೀ ಅಲ್ವಾ ಇವಳೇ!

ಆಮೇಲೆ ಇದು ನಮಗೆ ನಮ್ಮ ನಡುವೆ ಇರೋ ಒಂದು ಯಂತ್ರ ಅಥವಾ ಅದೊಂದು ಸಂಖ್ಯೆ ಅಂತಾ ಅನ್ನಿಸಲೇ ಇಲ್ಲ ಅಲ್ವಾ ಕೋತಿಮರೀ. ನಾನು ಎಲ್ಲೋ ಯಾವುದೋ ಊರಿನ ಹೋಟೆಲಿನಲ್ಲಿ ಮಲಗಿ ಬೆಳಗ್ಗೆ ಏಳೋಕು ಮುಂಚೆ ನಿನ್ನ ಮಿಸ್ಸಡ್ ಕಾಲು. ನಾನು ಮತ್ತೆ ತಕ್ಷಣ ರಿಂಗಣಿಸದಿದ್ದರೆ ನಿನ್ನಿಂದ ನನ್ನ ಎಲ್ಲಾ ಮರು ಕರೆಗಳ ಕಟ್. ಏನೆಲ್ಲಾ ಆಟ ಅಲ್ವಾ ನಮ್ದು! ಮಧ್ಯಾಹ್ನ ಮರೆಯದೆ ಊಟ ಆಯ್ತಾ? ಅಂತ ನಿನ್ನಿಂದ 1.30 ಕ್ಕೆ ಕರಕ್ಟಾಗಿ ಎಚ್ಚರಿಕೆಯಂತೆ ಬರುತ್ತಿದ್ದ ಕರೆಗೆ ನಾನು ಆಯ್ತು ಎನ್ನಲೇ ಬೇಕಿತ್ತಲ್ಲಾ. ಆಯ್ತು ಅನ್ನದಿದ್ದರೆ ಮತ್ತೊಂದು ಮಹಾಭಾರತ ಕಥೆಗೇ ನಾನು ಉತ್ತರಿಸಬೇಕಾಗುತ್ತಿತ್ತಲ್ಲಾ! ಅಕಸ್ಮಾತ್ ಎಂದಾದರೂ ನನಗೆ ಹಿಡಿಸುವ ಊಟ ಸಿಗಲಿಲ್ಲ ಕಣೇ ಅಂದ್ರೆ, ಅಲ್ಲೇ ಎಲ್ಲಾದರೂ ಗೆಡ್ಡೆ ಗೆಣಸು ನೋಡ್ಕೊಳ್ಳೋ ಗೂಬೆಮರೀ ಅಂತಿದ್ದ ನಿನ್ನ ತಮಾಷೆನೇ ಹೊಟ್ಟೆ ತುಂಬಿಸಿ ಬಿಡುತ್ತಿತ್ತಲ್ಲಾ!

ಆಮೆಲೆ ರಾತ್ರಿ ಆಯ್ತೂಂದ್ರೆ ಅದೊಂಥರಾ ಕಥೆ ಬಿಡು. ಅದನ್ನೆಲ್ಲಾ ಇಲ್ಲಿ ಹೇಳ್ಕೋಬೇಕಾ? ಛೀ,ಥೂ, ಬೇಡಪ್ಪಾ ಅದೆಲ್ಲಾ ಆ ಪರಮಾತ್ಮ ಪಿಚ್ಚರ್ ಮಾಡಿದ ಭಟ್ಟರಿಗೇ ಇರಲೀ ಅಲ್ವಾ. ಏನೆಲ್ಲಾ ಡೈಲಾಗ್ಸ್, ಚಿತ್ರಕಥೆ,ಲೊಕೇಶನ್ಸ್,ವಾವ್ ಅದೊಂಥರಾ ರಿಯಲೀ ಈಸ್ಟ್ ಮನ್ ಕಲರ್ ಕಲರ್ ಪಿಚ್ಚರ್ ಥರಾನೆ ಅಲ್ವಾ. ಯಾರಾದ್ರೂ ಕೇಳಿಸ್ಕೊಂಡಿದ್ರೆ ನಿಜಕ್ಕೂ ಎಲ್ಲ ವಿಭಾಗಗಳಿಗೂ ಸಿನಿ ಅವಾರ್ಡ್ ಡಿಕ್ಲೇರ್ ಮಾಡಿಬಿಟ್ಟಿರೋರು! ಅದಕ್ಕೇ ನೀನು ನನ್ನ ಸಿನಿವಲಯದ ಸ್ನೇಹಿತರ ಬಳಿ ಹೆಚ್ಚು ಮಾತಾಡೊಲ್ಲ ನನಗೂ ಗೊತ್ತು.

ಓ ಇವಳೇ, ಅತೀ ಮುಖ್ಯವಾದದ್ದನ್ನೇ ಮರೆತಿದ್ದೆ ನೋಡೇ! ನಮಗೆ ಒಬ್ಬರ ಹಿಂದೆ ಮತ್ತೊಬ್ಬನಂತೆ ಇಬ್ಬರು ಮಕ್ಕಳೂ ಅದ್ರೂ ಅಲ್ವೇನೇ! ಅವರು ಹುಟ್ಟಿದ್ದು ಕಣ್ಣು ಬಿಟ್ಟಿದ್ದು ನಕ್ಕಿದ್ದು ಅತ್ತಿದ್ದು ಎಲ್ಲವನ್ನೂ ನನಗೆ ದಾಟಿಸಿದ್ದು ಈ ಮೊಬೈಲೇ ಅಲ್ವಾ! ದೂರದ ಊರುಗಳಲ್ಲೇ ಹೆಚ್ಚು ಸಮಯ ಕೆಲಸದ ನಿಮಿತ್ತ ಬೀಡು ಬಿಟ್ಟಿರುತ್ತಿದ್ದ ನನಗೆ ಇದೊಂದು ನನ್ನ ವಯಕ್ತಿಕ ಬದುಕಿನ ನೋಟಕ್ಕೆ ಇರುವ ಏಕೈಕ ಹೆಬ್ಬಾಗಿಲಾಗಿತ್ತಲ್ವಾ. ನಿನ್ನ ಮೇಲೆ ಮಕ್ಕಳೂ, ಅವರ ತುಂಟಾಟ, ತರಲೆ, ಮಾಡಿಕೊಂಡ ಪೆಟ್ಟುಗಳ ಬಗ್ಗೆ ವರದಿ ಒಪ್ಪಿಸುವ ಕನ್ಫೆಷನ್ ಕಿಂಡಿಯಾಗಿಯೂ ಇದು ಕೆಲವೊಮ್ಮೆ ಕಾರ್ಯ ನಿರ್ವಹಿಸಿದೆ ಅಲ್ವೇನೆ. ಮಕ್ಕಳು ಮನೆಗೆ ಬರಲು ತಡವಾದರೆ ನಮ್ಮ ಸಹಾಯ ಬೇಕಾದರೆ ಅವರ ನಾಲಿಗೆ ಮೇಲೆ ನಲಿಯುತ್ತಿರುವ ನಂಬರ್ ಇದೇ ಅಲ್ವಾ.

ತೀರ ಇತ್ತೀಚೆಗೆ ಈ ನಂಬರ್ ** ** ***461 ಅದ್ಯಾವ ಕಾರಣಕ್ಕೋ ಅಥವಾ ಸಕಾರಣವಿಲ್ಲದೆಯೋ ಅಂತೂ ಇಂತೂ ಬಂದು ಬಿಡ್ತು. ಇದೇ ನಂಬರ್ ನಮಗೆ ನಿಜಕ್ಕೂ ಬೇಕಿತ್ತಾ? ಗೊತ್ತಿಲ್ಲ. ನನ್ನ ವೃತ್ತಿಪರ ಕೆಲಸಗಳಿಗೆ ನನ್ನ ಮಾಮೂಲಿ ಕರಾರಿನಂತೆ ಅವರದ್ದೇ ಕರೆಸ್ಸಿಯಲ್ಲಿ ಆ ಯೋಜನೆ ಮುಗಿಯುವ ತನಕ ಬಳಸುವ ನಂಬರ್ನಂತೆ ಮಾಮೂಲಿಯಾಗಿ ಬಂದ ಇದನ್ನೂ ಪಡೆದೆ. ಮೊದಲಿನಂತಾಗಿದ್ದಿದ್ದರೆ ಇದನ್ನೂ ಅವರ ಯೋಜನೆಯ ಕೊನೆಯ ವರದಿಯೊಂದಿಗೇ ವಿಸರ್ಜಿಸಿ ಬಿಡುತ್ತಿದ್ದೆ. ಆದ್ರೆ ಇದಕ್ಕೆ ಮಾತ್ರ, ಅದೇನು ಮಾಯ ಮಂತ್ರ ಆಯ್ತೋ ಗೊತ್ತಿಲ್ಲ!

ಇದರ ಮಾಮೂಲಿ ಕನಿಷ್ಟ ಕರೆಮಿತಿಯ ಪ್ಲಾನನ್ನು ಅದ್ಯಾವ ಕಾರಣಕ್ಕೋ ಕಾಣೆ ಅನ್-ಲಿಮಿಟೆಡ್ ಪ್ಲಾನ್ಗೆ ಬದಲಾಯಿಸಿಕೊಂಡಿದ್ದೆ. ಈ ನಂಬರ್ರಿಗೆ ಮಾತ್ರ ವಿಷೇಶವಾಗಿದ್ದಂತೆ ನಿನ್ನ ಕರೆಗಳನ್ನು ಕತ್ತರಿಸಿ ನಾನೇ ಮರು ಕರೆ ಮಾಡುವುದೊಂದು ಕರಾರು ಮಾಡಿಕೊಂಡಿದ್ದೆ. ಅದರಂತೆ ನಡೆದಿದ್ದೆ. ಈ ನಂಬರ್ರಿನಿಂದ ಹೊರ ಹೋದ ನಿನ್ನ ನಂಬರ್ರಿನ ಕರೆಗಳ ಸಮಯವೇ ನನ್ನ ಜೀವಮಾನದ ಅತಿ ಹೆಚ್ಚು ಮಾತನಾಡಿದ ದಾಖಲೆಯಾಗಿ ಉಳಿದಿದೆ ಪುಟ್ಟಮ್ಮ.

ಇವತ್ತಿಗೂ ಈ ನಂಬರ್ರು ನಿನ್ನ ನೆನಪಿನ ಶಾಶ್ವತ ಪಳೆಯುಳಿಕೆಯಾಗಿ ನನ್ನ ಬಳಿಯೇ ಉಳಿದಿದೆ. ನಿನಗಾಗಿ ಮಾಡಿಸಿದ್ದ ಆ ಅನ್ ಲಿಮಿಟೆಡ್ ಕರೆಯ ಪ್ಲಾನ್ ಈಗ ಮಂತ್ಲೀ ಆಕ್ಟಿವೇಶನ್ಗೆ ಬೇಕಿರುವ ಮಿನಿಮಮ್ ಚಾರ್ಜ್ ಪ್ಲಾನ್ಗೆ ಬದಲಾಗಿದೆ. ಪ್ರತೀ ತಿಂಗಳು ವಾರಕ್ಕೆ ಮುನ್ನ ಅದೇ ಕೊನೆದಿನದ ರಿಮೈಂಡರ್ ಬರುವಂತೆ ಸೆಟ್ಟಿಂಗ್ ಮಾಡಿದ್ದು ಈ ನಂಬರ್ ಕೊನೆಯುಸಿರೆಳೆಯದಂತೆ ರೀಚಾರ್ಜ್ ಮಾಡಿಸಿ ಜೀವ ಉಳಿಸಿಕೊಳ್ಳುತ್ತಿದ್ದೇನೆ. ನನ್ನನ್ನೂ ಮತ್ತು ನಮ್ಮಿಬ್ಬರ ನಡುವೆ ನಿನ್ನೊಂದಿಗೆ ಹುಟ್ಟಿ ಬೆಳೆದ ಎಲ್ಲಾ ಸಂಭಂದಗಳನ್ನೂ ಮಧುರ ನೆನಪುಗಳನ್ನೂ ನನಗೊಬ್ಬನಿಗೇ ಬಿಟ್ಟು ಅದೆಷ್ಟು ಸುಲಭವಾಗಿ ಹೊರನಡೆದು ಬಿಟ್ಟೆಯಲ್ಲಾ ಹುಡುಗಿ.

ನನ್ನನ್ನು ಮತ್ತೆ ಒಬ್ಬಂಟಿಯಾಗಿಸಿ ನನ್ನ ಬದುಕಿನಿಂದಲೂ ಮತ್ತು ಈ ಪ್ರಪಂಚದಿಂದಲೂ ಬಹುದೂರ ಹೊರಟು ಮರೆಯಾದ ನಿನ್ನ ಚಿರ ನೆನೆಪುಗಳ ಕನವರಿಕೆಗಳ ನೆನಪಾಗಿ ಈ ನಂಬರ್ ಇಂದಿಗೂ ಉಸಿರಾಡುತ್ತಿದೆ.ಎಂದಾದರೂ ನಿನ್ನ ಮಿಸ್ಸಡ್ ಕಾಲ್ ಮತ್ತೊಮ್ಮೆ ಈ ನಂಬರ್ರಿನ ಬಾಗಿಲಿಗೆ ಬಂದು ಕದ ಬಡಿದೀತೇನೋ! ಅಥವಾ “ಕಾಲ್ ಮಾಡೋ ಕೋತಿ” ಎಂಬ ಪುಟಾಣಿ ಎಸ್ಸೆಮ್ಮೆಸ್ ನನ್ನ ಇನ್ ಬಾಕ್ಸಿನೊಳಗೆ ಬಂದು ಇಣುಕಿನೋಡುವುದೇನೋ ಎಂಬ ನಿರೀಕ್ಷೆಯೊಂದಿಗೆ.

ಇಂತಿ
ಎಂದೆಂದೂ ನಿನ್ನವನೇ….

???????????????????????????????

ನನ್ನೊಳಗಿನ ಯುದ್ಧ – ಬಾಲ್ಯದ ನೆನಪಿಗೆ ದಕ್ಕಿದಂತೆ…

ನನಗೆ ನೆನಪಿರುವುದು ಅಮ್ಮ ಮತ್ತು ಅಕ್ಕಂದಿರು ತಂದು ಕೊಡುತ್ತಿದ್ದ ಬಾಲಮಿತ್ರ, ಚಂದಮಾಮ ಎಂಬ ಚಿತ್ರಿತ ಕಥೆಗಳ ರಾಜರು, ಯೋಧರು ಮಾತ್ರ. ಮೊದಮೊದಲು ಒಂದು ಕಥೆಯನ್ನು ಪೂರ್ತಿ ಓದಲು ಬಾರದಿರುತ್ತಿದ್ದರೂ, ಅದರಲ್ಲಿನ ಎಲ್ಲ ಚಿತ್ರಗಳನ್ನೂ ಸರ ಸರ ಎಂದು ತಿರುವಿ ಹಾಕಿ ಇಡೀ ಕಥೆಯನ್ನು ಚಿತ್ರಗಳ ಮೂಲಕವೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅದರಲ್ಲೂ ಕುದುರೆ, ಆನೆ ಮೇಲೆ ಕುಳಿತ ಯೋಧರ ರಾಜರ ಚಿತ್ರಕಥೆಗಳಿದ್ದರಂತೂ ಮೊದಲ ತಿರುವಿಗೆ ಆ ಕಥೆಗಳೇ ಗುರಿಯಾಗುತ್ತಿದ್ದವು.

ಓದಲು ಬಂದ ನಂತರ ನನ್ನ ಮನಸ್ಸಿನಲ್ಲೂ ಅದೇ ರಾಜರ ಯುದ್ಧದ ಕಥೆಗಳೂ ಸ್ವಾತಂತ್ರ ಸಂಗ್ರಾಮದ ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪೂ ಸುಲ್ತಾನ ಮುಂತಾದವರ ಚಿತ್ರಕತೆಗಳು ಬಹಳ ದಿನಗಳ ತನಕ ಕಾಡುತ್ತಿದ್ದವು. ಕೆಲವೊಮ್ಮೆ ಕನಸಿನಲ್ಲೂ ಬಂದು ಬೆಳಗ್ಗೆ ಅದರ ಬಗ್ಗೆ ಅಮ್ಮನಲ್ಲೋ ಅಕ್ಕಂದಿರಲ್ಲೋ ಕುತೂಹಲಗೊಂಡು ವಿಚಾರಿಸಿಕೊಳ್ಳುತ್ತಿದ್ದೆ. ಅದರ ಮುಂದುವರಿದ ಭಾಗವಾಗಿ ಗೆಳೆಯರೊಂದಿಗೆ ಆಟವಾಡಲು, ಬಿಲ್ಲು, ಬಾಣ, ಗುರಾಣಿ, ಫಿರಂಗಿ, ತೋಪು ಮುಂತಾದವುಗಳ ಮಾದರಿ ಮಾಡಿ ಸಿದ್ಧ ಮಾಡಿಕೊಂಡಿರುತ್ತಿದ್ದೆ.

ಜೇಡಿ ಮಣ್ಣು ಸಿಕ್ಕರೂ, ಚಕ್ಕೋತ ಹಣ್ಣಿನ ಹೊರ ಸಿಪ್ಪೆ ಸಿಕ್ಕರೂ ಕೂಡ ಅದರಲ್ಲಿ ಫಿರಂಗಿ ತೋಪಿನ ಗಾಡಿ ಮಾಡಿ ಆಟಕ್ಕೆ ಸಿದ್ಧಮಾಡಿಕೊಳ್ಳುತ್ತಿದ್ದೆ. ಒಮ್ಮೊಮ್ಮೆ ನನ್ನ ಈ ಆಸಕ್ತಿಗೆ ಪೂರಕವಾಗಿ ನಾನಿಲ್ಲದಾಗ ಮನೆಯಲ್ಲಿ ಅಮ್ಮನೋ ಮಾವನೋ ಚಕ್ಕೋತ ಹಣ್ಣು ಸುಲಿದರೆ ಅದರಲ್ಲಿ ಅವರೂ ನನಗಾಗಿ ಆಟವಾಡಲು ಫಿರಂಗಿ ತೋಪಿನ ಗಾಡಿ ಸಿದ್ಧ ಮಾಡಿ ಇಟ್ಟಿರುತ್ತಿದ್ದರು. ಬಾನುವಾರ ಬಂತೆಂದರೆ ಸಾಕು, ನನ್ನ ಬೇಟೆ ಶುರುವಾಗುತ್ತಿತ್ತು. ನಾನು ಮಾಡಿಟ್ಟ ಬಿಲ್ಲು ಬಾಣಗಳ ಎದೆಗೇರಿಸಿಕೊಂಡು ಗೆಳೆಯರ ದಂಡಿನೊಂದಿಗೆ ತೋಟದ ಸಾಲುಗಳಲ್ಲಿ ನಮ್ಮ ಮನೆಗಳಲ್ಲಿ ನಮಗಾಗಿಯೇ ಸಾಕಿದ್ದ ನಾಯಿ ಮರಿಗಳ ಸೈನ್ಯ ದೊಂದಿಗೆ ಸಂಚರಿಸುತ್ತಿದ್ದೆವು.

ತೋಟಗಳಲ್ಲಿ ಮರದ ಮೇಲೆ ಕುಳಿತ ಹದ್ದು,ಕಾಗೆಗಳು ನಮ್ಮ ಕಣ್ಣಿಗೆ ಶತ್ರು ಸೈನಿಕರಂತೆ ಕಂಡು ಅವುಗಳ ಮೇಲೆ ನಮ್ಮ ಬಿಲ್ವಿದ್ಯೆಯನ್ನೆಲ್ಲ ಪ್ರಯೋಗಿಸಲು ಹೋಗುತ್ತಿದ್ದೆವು. ಆಗ ಅವುಗಳು ಒಮ್ಮೆ ನಮ್ಮತ್ತ ನಕ್ಕಂತೆ ಮಾಡಿ ಪುರ್ರಂತ ಹಾರಿ ಆಕಾಶದಲ್ಲಿ ಮರೆಯಾಗುತ್ತಿದ್ದವು. ನಮ್ಮ ಶಕ್ತಿಯ ಬಗ್ಗೆ ಅಚಲ ನಂಬಿಕೆಯಿದ್ದ ನಾವುಗಳು ಇದರಿಂದ ವಿಚಲಿತರಾಗದೇ, ತಕ್ಷಣ ಬೇಲಿಸಾಲಿನ ಮೇಲೆ, ತಲೆ ಈಚೆ ಹಾಕಿ ಮೇಲಕ್ಕೂ ಕೆಳಕ್ಕೂ ಕುಣಿಸುತ್ತಿದ್ದ ಹೆಂಟೆಗೊದ್ದಗಳಿಗೆ ಗುರಿಯಿಡುತ್ತಿದ್ದೆವು. ಅವುಗಳೋ ನಾವು ಬಿಲ್ಲೆತ್ತಿ ಬಾಣ ಹೂಡುವುದರೊಳಗೆ ಬೇಲಿಯೊಳಗಿನ ಹಸಿರಿನ ಮರೆಯಲ್ಲಿ ಕಣ್ಮರೆಯಾಗಿ ಬಿಡುತ್ತಿದ್ದವು. ನಿರಾಸೆಗೊಂಡ ನಾವುಗಳು ನಮ್ಮ ಶ್ವಾನದಳಕ್ಕೆ ಹುರಿದುಂಬಿಸಿ ಅವುಗಳನ್ನು ಹುಡುಕಲು ಹಚ್ಚುತ್ತಿದ್ದೆವು.

ಪ್ರಕೃತಿಯ ಪ್ರಿಯರ ಜೊತೆಗಿನ ಯುದ್ಧದಲ್ಲಿ ಸೋತು ಸುಣ್ಣವಾಗಿ ಕೊನೆಗೆ, ನಾವುಗಳೇ ಎರಡು ತಂಡಗಳಾಗಿ ಆ ರಾಜ್ಯ ಮತ್ತು ಈ ರಾಜ್ಯಗಳ ನಡುವೆ ಯುದ್ಧ ಸಾರಿಬಿಡುತ್ತಿದ್ದೆವು. ನಮ್ಮ ಬಿಲ್ಲು ಬಾಣಗಳು ಒಮ್ಮೊಮ್ಮೆ ಚೂಪಾದ ಜಾಲಿ ಮುಳ್ಳಿನ ತುದಿಹೊಂದಿದ್ದು ನಿಜಕ್ಕೂ ನಮ್ಮ ವೈರಿ ಪಡೆಯವರಿಗೆ ತಾಗಿ ಚುಚ್ಚಿ ರಕ್ತಬಂದ ಕಾರಣಕ್ಕೆ ನಮಗೆ ನಮ್ಮ ಮನೆಯವರಿಂದ ಪೆಟ್ಟುಬಿದ್ದು ನಮ್ಮ ಯುದ್ದಗಳು ಮತ್ತಷ್ಟು ಗುಪ್ತವಾಗಿ ನಡೆಯುತ್ತಿದ್ದವು. ಈ ರೀತಿಯ ಗುಪ್ತವಾದ ಮತ್ತು ಆಪ್ತರ ನಡುವೆ ಮಾತ್ರ ನಡೆಯುತ್ತಿದ್ದ ಯುದ್ಧಗಳು ಮತ್ತು ಅದರಿಂದುಂಟಾದ ಅನಾಹುತಗಳು ಮನೆಯವರಿಗೆ ವರದಿಯಾದದ್ದೇ ಕಡಿಮೆ. ಗೆಳೆತನದಲ್ಲಿ ಬಿರುಕುಬಿಡುವ ತನಕ ಈ ಅನಾಹುತಗಳು ಗೌಪ್ಯವಾಗಿರುತ್ತಿದ್ದವು.

ಮತ್ತೆ ನಮ್ಮ ಚಿತ್ರಿತ ಕಥೆಗಳ ಯುದ್ಧದ ಕನಸುಗಳು ಸಾಕಾರಗೊಳ್ಳುತ್ತಿದ್ದುದು ನಮ್ಮೂರು ಜಾತ್ರೆಗಳಿಗಾಗಿ ನಡೆಯುತ್ತಿದ್ದ ಕುರುಕ್ಷೇತ್ರ ನಾಟಕಗಳಲ್ಲಿ ನಮ್ಮನ್ನು ಯಾವುದೋ ರಾಜನ ಪಕ್ಕ ನಿಲ್ಲುವ ಸೈನಿಕರ ವೇಶಕ್ಕೆ ಸೇರಿಸಿಕೊಂಡಾಗ. ಆ ದಿನಗಳಲ್ಲಿ ನಮಗೆ ಮೈತುಂಬಾ ನೇತಾಡುವಂತೆ ಧರಿಸುತ್ತಿದ್ದ ಧಿರಿಸುಗಳಲ್ಲಿ ನಾವು ಅದೇ ದೇಶಗಳ ರಾಜರೇನೋ ಎಂಬಂತೆ ಬೀಗಿಕೊಂಡು ಮರೆಯದೆ ಫೋಟೋ ಹಿಡಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿಕೊಂಡಿರುತ್ತಿದ್ದೆವು. ನಾಟಕ ಮುಗಿದರೂ ಹಲವಾರು ತಿಂಗಳುಗಳ ತನಕ ಊರುತುಂಬಾ ನಮ್ಮ ಗೆಳೆಯರ ಸಂಗಡವಿದ್ದಾಗ ಅದೇ ಐತಿಹಾಸಿಕ ನಾಟಕದ ಸಂಭಾಷಣೆಗಳು ಮರುಬಳಕೆಗೊಳ್ಳುತ್ತಿದ್ದವು.

ಮತ್ತೆ ನನ್ನೊಳಗಿನ ಯುದ್ಧದ ನೆನಪುಗಳು ಕಾಡುವುದು ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭಂದವಾಗಿ ನಡೆಸಲ್ಪಡುತ್ತಿದ್ದ ನಾಟಕಗಳು, ವಿವಿಧ ವೇಶಭೂಷಣಗಳ ಸ್ಪರ್ಧೆಗಳ ಸಂಧರ್ಭಗಳಲ್ಲಿ. ನಾವು ನಾವೇ ತಂಡ ಕಟ್ಟಿಕೊಂಡು ನಮ್ಮ ಮೆಚ್ಚಿನ ದೈಹಿಕ ಶಿಕ್ಷಕರ ಮನವೊಲಿಸಿ ಆದಷ್ಟೂ ಐತಿಹಾಸಿಕ ಕಾದಂಬರಿಗಳನ್ನೇ ಆರಿಸಿಕೊಳ್ಳಲು ದಂಬಾಲು ಬೀಳುತ್ತಿದ್ದೆವು. ಅದರಲ್ಲಿ ನನಗೆ ಈ ಪಾತ್ರ ನಿನಗೆ ಈ ಪಾತ್ರವೆಂದು ಮೊದಲೇ ಪೂರ್ವನಿಯೋಜನೆಗೊಳಿಸಿಕೊಂಡು ಅದರಂತೆ ನಮ್ಮ ಶಿಕ್ಷಕರಲ್ಲಿ ನಿವೇದನೆ ಮಾಡುತ್ತಿದ್ದೆವು.

ಅವರು ಅದಕ್ಕೇನಾದರೂ ಒಪ್ಪಿ ಬಿಟ್ಟರೆ ನಮ್ಮಗಳ ಖುಷಿಗೆ ಮಿತಿಯೇ ಇಲ್ಲಾ. ತಕ್ಷಣವೇ ನಮ್ಮ ತಯಾರಿ ಪ್ರಾರಂಭಿಸಿಬಿಡುತ್ತಿದ್ದೆವು. ಶಾಲೆ ಮುಗಿದರೂ ನಮ್ಮ ಯುದ್ಧಗಳೂ ಆ ನಮ್ಮ ನಮ್ಮ ವೇಶಗಳೊಳಗೆ ಉಳಿದಿರುತ್ತಿದ್ದ ಆ ರಾಜರ ಭಾವಾವೇಶಗಳು ಮಾತ್ರ ಮುಗಿದಿರುತ್ತಿರಲಿಲ್ಲ. ನಮ್ಮ ಈ ಮುಗಿಯದ ಯುದ್ದಗಳಿಗೆ ಒಮ್ಮೊಮ್ಮೆ ನಮ್ಮನ್ನು ಹುಡುಕಿಕೊಂಡು ಶಾಲೆಯ ಬಳಿಯೋ, ನಮ್ಮ ಮಾಮೂಲಿ ದೇವಸ್ಥಾನದ ಹಿಂದಿನ ಬಯಲಿಗೋ, ಬಂದ ನಮ್ಮ ಮನೆಯ ನಾಯಿಗಳು ನಮ್ಮ ಯುದ್ಧದ ಕುದುರೆಗಳಾಗಿ ಮಾರ್ಪಾಡಾಗುತ್ತಿದ್ದವು.ಅವುಗಳ ಕಿವಿಗಳನ್ನೇ ಒಂದು ಕೈಯಲ್ಲಿ ಹಿಡಿದುಕೊಂಡು, ಎರಡೂ ತೊಡೆಗಳಿಂದ ಅದರ ಹೊಟ್ಟೆ ಭದ್ರವಾಗಿ ಹಿಡಿದುಕೊಂಡು ನಮ್ಮ ಯುದ್ಧದ ಸಂಭಾಷಣೆಗಳು ನಡೆಸಲ್ಪಡುತ್ತಿದ್ದವು.

ಇದಾವುದೂ ಅರ್ಥವಾಗದ ನಮ್ಮ ನಾಯಿಗಳು ಒಮ್ಮೊಮ್ಮೆ ಗೊಂದಲಗೊಂಡು ನಮ್ಮನ್ನು ಕೆಳಕ್ಕೆ ಕೆಡವಿ,ಹಿಂತಿರುಗಿ ನೋಡದಂತೆ ನಮ್ಮ ಕೈಗೆ ಮತ್ತೆ ಸಿಗದಂತೆ ಮಾಯವಾದದ್ದಿದೆ. ಇದೇ ಸಂಧರ್ಭಕ್ಕೆ ಕಾದಿದ್ದ ನಮ್ಮ ಎದುರಾಳಿಗಳು ಯುದ್ಧದಲ್ಲಿ ನಮ್ಮ ರಾಜ್ಯಕ್ಕೆ ಸೋಲುಂಟಾಯಿತೆಂದು ನಮ್ಮನ್ನು ಯುದ್ಧಕೈದಿಯನ್ನಾಗಿಸಿ ಕೀಳಾಗಿ ನಡೆಸಿಕೊಂಡದ್ದೂ ಇದೆ. ಈ ನಾಯಿಗಳ ಸಹವಾಸ ಬಹಳ ಕಷ್ಟವೆಂದರಿತು ನಮ್ಮ ಯುದ್ಧ ಪರಿಣತರು ಭಾನುವಾರಗಳಂದು ನಮ್ಮೂರಿನ ಮನೆಗಳಿಂದ ಬಯಲಲ್ಲಿ ಮೇಯಲು ಬರುವ ಎಮ್ಮೆಗಳನ್ನು ಆಯ್ಕೆಮಾಡಿಕೊಂಡದ್ದಿದೆ.

ಅವುಗಳ ಮೇಲೆ ಹತ್ತುವುದಷ್ಟೇ ನಮಗೆ ಸ್ವಲ್ಪ ಕಷ್ಟದ ಕೆಲಸ. ಸೈನಿಕರೆನಿಸಿಕೊಂಡವರ ಸಹಕಾರದಿಂದ ರಾಜನಾದವನು ಒಮ್ಮೆ ಎಮ್ಮೆಗಳ ವಿಶಾಲವಾದ ಬೆನ್ನಿನ ಮೇಲೆ ಹತ್ತಿ ಕುಳಿತರೆ ಮುಗಿಯಿತು. ಎಮ್ಮೆಗಳು ಅವುಗಳ ಪಾಡಿಗೆ ಹುಲ್ಲು ಮೇಯುತ್ತಿದ್ದರೆ ಮೆಲೆ ಕುಳಿತ ನಮ್ಮ ನಕಲಿ ರಾಜರುಗಳು ವೀರಾವೇಶದಿಂದ ಹೋರಾಟದ ಸಂಭಾಷಣೆಗಳಲ್ಲಿ ತಲ್ಲೀನರಾಗಿರುತ್ತಿದ್ದರು. ಅಲ್ಲಿಂದಲೇ ಅವರ ಬಿಲ್ಲು ಬಾಣಗಳನ್ನು ಹೂಡಿ ಎದುರು ದೇಶದ ಸೈನಿಕರನ್ನು ಗುರಿಯಾಗಿಸಿ “ಸುಯ್-ಸುಯ್” ಎಂಬ ಶಬ್ಧಸಹಿತವಾದ ಬಾಣಗಳನ್ನು ಬಿಡುತ್ತಿದ್ದರು. ಇವರಿಗೆ ಎದುರಾಗಿ ಮೇಯುವ ಎಮ್ಮೆಯ ಮೇಲೆ ಕುಳಿತ ಶತ್ರು ರಾಜನೂ ಇವರಿಗಿನ್ನ ಮೀರಿದ ಧ್ವನಿಯಲ್ಲಿ “ರೊಯ್- ರೊಯ್” ಎಂಬ ಶಬ್ಧಸಹಿತವಾದ ಬಾಣಗಳನ್ನು ಬಿಡುತ್ತಿದ್ದನು. ನೆಲದಲ್ಲಿ ಮರದ ತುಂಡುಗಳ ಮೊಂಡು ಕತ್ತಿಗಳೊಂದಿಗೆ ವೀರಾವೇಶದಿಂದ ಹೋರಾಡುತ್ತಿದ್ದ ಸೈನಿಕರು ಅವರವರ ರಾಜರ ಬಾಣಗಳನ್ನು ಗುರುತಿಟ್ಟುಕೊಂಡು ಮತ್ತೆ ಮತ್ತೆ ಆರಿಸಿ ಅವರವರದ್ದೇ ಬತ್ತಳಿಕೆಗಳಿಗೆ ತುಂಬಿಸಲು ಸಹಕರಿಸಬೇಕಿತ್ತು.

ಎಮ್ಮೆಗಳು ಹೊಟ್ಟೆತುಂಬಾ ಮೇಯ್ದು ಪಕ್ಕದಲ್ಲಿದ್ದ ನೀರುತುಂಬಿದ ಕಾಲುವೆಗಳ ಕಡೆ ನೀರು ಕುಡಿಯಲು ನಡೆದಾಗ ಮೇಲಿದ್ದ ರಾಜರುಗಳು ಕೆಳಗೆ ಹಾರಿ ತಪ್ಪಿಸಿಕೊಳ್ಳದಿದ್ದರೆ ಅವರ ಗತಿ ದೇವರೇ ಗತಿಯಾಗುತ್ತಿತ್ತು. ರಾಜರುಗಳನ್ನು ಹೊತ್ತುಕೊಂಡೇ ಎಮ್ಮೆಗಳು ನೀರಿನಲ್ಲಿ ಹಾಯಾಗಿ ಈಜಲು ಹೋದ ಸಂದರ್ಭಗಳಲ್ಲಿ ಈಜಲು ಬಾರದ ರಾಜರುಗಳು “ಲಬೋ ಲಬೋ” ಎಂದು ಬೊಬ್ಬೆ ಹೊಡೆದು ದಡದಲ್ಲಿದ್ದವರನ್ನು ಕರೆಯದಿದ್ದರೆ ಅವರ ನಾಟಕದ ರಾಜನ ಪಾತ್ರದಾರಿ ಅವರೊಂದಿಗೆ ಜೀವಂತ ನೀರುಪಾಲಾಗುತ್ತಿದ್ದುದು ಖಂಡಿತಾ.

sha 8

ಮೋಸಗಾರ ಮನಸ್ಸು.

ನಿನ್ನನ್ನು ನೆನಪಿಸುವ
ಎಲ್ಲವುಗಳಿಂದ
ಎಂದೋ ದೂರಾಗಿದೆ,
ಖಾಲಿಯೂ ಆಗಿದೆ.

ಆದರೂ,

ನಿನ್ನೊಬ್ಬಳನ್ನು
ಮರೆಯದಿರಲು ,
ಈ ಕ್ಷಣಕ್ಕೂ ಹಠಕ್ಕೆ ಬಿದ್ದಿದೆ.
ನಿನ್ನಿಂದಲೇ ತುಂಬಿ
ತುಳುಕಾಡುತ್ತಿದೆ,
ಮೋಸಗಾರ ಮನಸ್ಸು.

ಇಂಟರ್ನೆಟ್ ಚಿತ್ರ

ಇಂಟರ್ನೆಟ್ ಚಿತ್ರ

ಹಕ್ಕಿಯೊಂದು ಹಾರಿದೆ.

ಕಿಟಕಿಗೊರಗಿ ನಿಂತಿದೆ ದೇಹ,
ಬಿಸಿ ಬಿಸಿ ಟೀ ಇದೆ ಕೈಯಲ್ಲಿ,
ಊಟಿಯ ಟೀ ಘಮಲು ಮೂಗಲ್ಲಿ,
ದೂರದ ಭೀಮೆಯೊಡಲು ಕಣ್ಣಲ್ಲಿ.

ಮೋಡ ಬರೆದ ನಕ್ಷೆ ನಭದಲ್ಲಿ,
ಬೆಳ್ಳಿಕೋಲು ಮೂಡಿವೆ ಬೆಳಗಲ್ಲಿ,
ಮೈ ಮರೆತಿದೆ ತಂಗಾಳಿಯಲ್ಲಿ,
ಕಪ್ಪು ಹಕ್ಕಿಯೊಂದು ಹಾರಿದೆ ದೂರದಲ್ಲಿ.

ದೇಹ ಸಜ್ಜಾಗಿದೆ ಕುತೂಹಲದಲ್ಲಿ,
ಕಣ್ಣು ಸಹಕರಿಸಿದೆ ಕೇಂದ್ರೀಕರಿಸುವಲ್ಲಿ,
ಹುಲ್ಲಿನ ಕಡ್ಡಿಯೊಂದು ಹಕ್ಕಿಯ ಬಾಯಲ್ಲಿ,
ಬಳಸಲು ಮರದ ತುದಿಯ ಗೂಡಲ್ಲಿ.

ಮಿಲನಗೊಂಡ ಗಂಡು ಹಕ್ಕಿಯ ನೆನಪಲ್ಲಿ,
ಮುಂಗಾರಿಗೆ ಹುಟ್ಟುವ ಮರಿಗಳ ಕನಸಲ್ಲಿ,
ಮಳೆ ಗಾಳಿಗೆ ರಕ್ಷಿಸಲೆಂಬ ಕನವರಿಕೆಯಲಿ,
ಹುಲ್ಲು ಹೊತ್ತು ಹಾರಿದೆ ಗೂಡಿನ ಆಸೆಯಲಿ.

tumblr_m6jq11hqH21r3e297o2_1280

ಚೆರಿಯನ ಕಾರಿನ ಸವಾರಿ ಗೀಳೂ…

ಮೊನ್ನೆ ಬಾನುವಾರ ಮನೆಯಲ್ಲಿದ್ದೆ. ಅಂದು ನಮ್ಮ ತೋಟದಲ್ಲಿ ಮಕ್ಕಳಿಗೆ ವರ್ಲಿ ಚಿತ್ರಕಲೆಯ ಕಾರ್ಯಾಗಾರವೂ ಇತ್ತು. ಬೆಳಗ್ಗೆ ಬೆಳಗ್ಗೆ ಎದ್ದು ಎಲ್ಲಾ ವ್ಯವಸ್ಥೆ ಮಾಡಬೇಕಿತ್ತು. ಅಥಿತಿಗಳು, ಮಕ್ಕಳು, ಸಂಪನ್ಮೂಲ ವ್ಯಕ್ತಿಗಳು ಎಲ್ಲರ ಅಂದಿನ ಅವಶ್ಯಕತೆಗಳನ್ನು ಗಮನಿಸಬೇಕಿತ್ತು. ಶಿವು ಕೇಳಿದ್ದ ಕೆಲವು ಚಿತ್ರಕಲೆಗೆ ಸಂಭಂದಿಸಿದ ಮುಖ್ಯವಾದ ವಸ್ತು ಖರೀದಿಸಲು ಚಿನಾಹಳ್ಳಿಗೆ ಹೋಗಬೇಕಾಗಿ ಬಂತು. ಕಾರು ಈಚೆ ತೆಗೆದೆ.

ಒಳಗಿಂದ ಅನೀಶ ಕೂಗಿ ಹೇಳಿದ “ಅಪ್ಪಾ ನಾನೂ ಬರ್ತೀನಿ ತಡಿಯಪ್ಪಾ”. ಓಕೆ, ಬೇಗ ಬಾ ಎಂದ ನಾನು ಕಾರಿನ ಹಿಂದಿನ ಬಾಗಿಲು ತೆರೆದಿಟ್ಟೆ. ನಾನು ಚಾಲಕನ ಸೀಟಿಗೆ ಕುಳಿತೆ. ಅವಸರವಾಗಿ ಬಟ್ಟೆ ಧರಿಸಿ ಓಡಿಬಂದ ಅನಿಶ ಕಾರಿನೊಳಗೆ ತೂರಿಕೊಂಡ.ನಾನು ನನ್ನ ಆಲೋಚನೆಗಳಲ್ಲಿ ಕಳೆದುಹೋಗಿದ್ದವನಿಗೆ ಹಿಂದಿನ ಸೀಟಿನಲ್ಲಿ ನಡೆದ ಗಲಾಟೆ ಎಚ್ಚರಿಸಿತ್ತು.

ಅನಿಶನಿಗಿನ್ನ ಮುಂಚೆ ಒಳಬಂದು ಸೇರಿದ್ದ ನಮ್ಮ “ಚೆರಿಯ” ಕಿಟಕಿ ಪಕ್ಕ ಆಸೀನನಾಗಿದ್ದ. ಯಾವಾಗಲೂ ಕಿಟಕಿ ಪಕ್ಕ ಕುಳಿತುಕೊಳ್ಳಲು ಗಲಾಟೆ ಮಾಡುವ ಅನಿಶ ಇದರಿಂದ ಸಹಜವಾಗಿ ಇರುಸುಮುಸುರುಗೊಂಡಿದ್ದ. ಅನಿಶ ಚೆರಿಯನೊಂದಿಗೆ ಜಗಳಕ್ಕಿಳಿದಿದ್ದ. ಚೆರಿಯನನ್ನು ಪೂಸಿ ಮಾಡುತ್ತಿದ್ದ, ಅದು ನಡೆಯದಾದಾಗ ಗದರಿಸುತ್ತಿದ್ದ. ಯಾವುದಕ್ಕೂ ಚೆರಿಯ ಬಗ್ಗಿದಂತೆ ಕಾಣಲಿಲ್ಲ.

ಅನಿಶ ಚೆರಿಯನೊಂದಿಗೆ ಮುನಿಸಿಕೊಂಡಿದ್ದ. ಅದರೂ ಜಗಮೊಂಡ ಚೆರಿಯ ವಿಚಲಿತನಾಗಿರಲಿಲ್ಲ. ನನಗೂ ಇವರಿಬ್ಬರ ಗಲಾಟೆಯ ಮುಂದುವರಿದ ಭಾಗ ಮೊದಲೇ ಗೊತ್ತಿರುವುದರಿಂದ ಜಗಳ ಬಗೆಹರಿಸದೇ ಕಾರು ಚಲಿಸುವಂತಿರಲಿಲ್ಲ. ಅದಕ್ಕಾಗಿ ನಾನು ಇಬ್ಬರಲ್ಲೂ ಯಾರಾದರೂ ಸೋತು ಗೆಲ್ಲಲು ವಿನಂತಿಸಿಕೊಂಡೆ. ಆದರೆ ಇಬ್ಬರೂ ತಮ್ಮ ತಮ್ಮ ಜಾಗಗಳಿಂದ ಕದಲುವ ಸೂಚನೆಗಳೇನೂ ಕಾಣಲಿಲ್ಲ.

ಕೊನೆಗೆ ನಾನು ಕಾರಿನಿಂದ ಕೆಳಗಿಳಿದೆ. ನಿಮ್ಮಿಬ್ಬರ ಜಗಳ ಬಗೆಹರಿಯದೇ ನಾನು ಕಾರು ಚಲಿಸುವುದಿಲ್ಲವೆಂದು ಇಬ್ಬರಿಗೂ ಹೇಳಿದೆ. ನನ್ನ ಈ ನಿರ್ಧಾರಕ್ಕೆ ಬೇಸರಗೊಂಡ ಅನಿಶ, ಚೆರಿಯನನ್ನು ಶಪಿಸುತ್ತಿದ್ದ. ತಕ್ಷಣ ಎಚ್ಚೆತ್ತುಕೊಂಡ ಚೆರಿಯ ನನ್ನನ್ನು ಅವನ ಮಾಮೂಲಿ ಪೂಸಿಯ ಬಾಷೆಯಲ್ಲಿ ಕರೆಯಲಾರಂಭಿಸಿದ. ನನಗೂ ಅವನ ಒಳಮನಸ್ಸು ಗೊತ್ತಾಯ್ತು. ಏನಪ್ಪಾ ನಿನ್ನ ಸಮಸ್ಯೆ ಎಂದು ವಿಚಾರಿಸುವವನಂತೆ ಅವನ ಬಳಿ ಸಾರಿದೆ. ಚಕ್ಕಂತ ನನ್ನ ಕೈಗಳನ್ನು ಅವನ ಮುಂಗಾಲುಗಳಲ್ಲಿ ಸವರಲು ಪ್ರಾರಂಭಿಸಿದ ಅವನು ನನಗೆ ಕಾರು ಚಲಿಸಲು ಒತ್ತಾಯಪೂರ್ವಕವಾಗಿ ಸೂಚಿಸಲಾರಂಭಿಸಿದ.

ಒಳಗೊಳಗೇ ನಗುತ್ತಿದ್ದ ನನಗೆ ಚೆರಿಯ ನನ್ನ ಅಂಗೈಯೊಳಗೆ ಅವನ ತಲೆಯಿರಿಸಿ ನಾಲಗೆಯಿಂದ ನೆಕ್ಕಿ ನೆಕ್ಕಿ ತಪ್ಪಾಯ್ತು ಪ್ಲೀಸ್ ಕಾರಲ್ಲಿ ಕರೆದುಕೊಂಡು ಹೋಗೆಂದ. ಅನಿಶನ ಕಣ್ಣಲ್ಲೂ ಕಣ್ಣಿರು ಜಿನುಗುತ್ತಿತ್ತು. ಓಕೆ ಓಕೆ ಬಿಡ್ರಪ್ಪಾ ಎಲ್ಲರೂ ಜೊತೆಗೇ ಹೋಗೋಣವೆಂದು ಹೇಳಿ ಕಾರಿನೊಳಗೆ ಸೇರಿಕೊಂಡೆ.ಕೀ ತಿರುಗಿಸಿ ಕಾರ್ ಚಾಲೂ ಮಾಡಿದೆ.

ಹಿಂದಿನ ಸೀಟಿನಲ್ಲಿ ಖುಷಿಯ ಅಲೆ ಉಕ್ಕೇರಿತ್ತು. ನನ್ನ ಕಾರಿನ ಸೈಡ್ ಮಿರ್ರರಿನಲ್ಲಿ ಅದೇ ಒಂದೇ ಕಿಟಕಿಯಲ್ಲಿ, ಇಬ್ಬರೂ ಒಬ್ಬರಿಗೊಬ್ಬರು ಮುಖವೊತ್ತಿಕೊಂಡು ಒಟ್ಟಿಗೆ ಸಂಭ್ರಮಿಸುತ್ತಿದ್ದ ಕಂಡು ನನ್ನ ಕಣ್ಣಲ್ಲಿ ತಿಳಿನೀರು ಅರಿವಿಲ್ಲದಂತೆ ಜಿನುಗಿತ್ತು.
ಕಾರು ಮುಂದೆ ಚಲಿಸಿತ್ತು.

(ನಮ್ಮ ಚೆರಿಯನ ಕಾರ್ ಸವಾರಿಯ ಗಲಾಟೆಯನ್ನು ನಿಮ್ಮ ಮುಂದಿಡಲು ನಡೆದ ಘಟನೆಯನ್ನು ಅವನ ಮಾಮೂಲಿ ಸ್ಟೈಲಲ್ಲಿ ಚಿತ್ರೀಕರಿಸಿದ್ದ ನನ್ನ ಮೊದಲ ಮಗ ನಕ್ಷತ್ರನನ್ನ ಹೇಗೆ ಮರೆಯಲಿ… )

???????????????????????????????

???????????????????????????????

???????????????????????????????

???????????????????????????????

???????????????????????????????

???????????????????????????????

???????????????????????????????

ಈ ಬ್ಲಾಗೆಂಬ ತೆರೆದ ಬಾಗಿಲು,,,,

ಕೆಲವರಿಗೆ……
ಇದೊಂದೇ ಬಾಗಿಲು

ಸುರತಿಗೆ, ಆತ್ಮರತಿಗೆ.
ವಿರಸಕೆ, ಸರಸಕೆ.

ಅಳಿವಿಗೆ, ಉಳಿವಿಗೆ.
ಮೌಢ್ಯಕೆ, ಅರಿವಿಗೆ,

ಗೌಪ್ಯಕೆ, ಬಯಲಿಗೆ.
ತೋರಿಕೆಗೆ, ಮುಚ್ಚಿಕೆಗೆ.

ತೆಗಳಿಕೆಗೆ, ಹೊಗಳಿಕೆಗೆ.
ಶಾಪಕೆ,ಕ್ಷಮೆಗೆ.

ಬಿಕ್ಷೆಗೆ,ದಾನಕೆ.
ದ್ವೇಶಕೆ,ಪ್ರೀತಿಗೆ.

ಬಾವಕೆ,ಭಕ್ತಿಗೆ.
ಸಾವಿಗೆ,ಬದುಕಿಗೆ.

ಏರಲು,ಇಳಿಯಲಿಕ್ಕೆ.
ಹಾರಲು,ಮುಳುಗಲಿಕ್ಕೆ.

ನಿರ್ಜೀವಕೆ,ಜೀವಕೆ.
ಭ್ರಮೆಗೆ, ವಾಸ್ತವಕೆ.

ದೇಹಕೂ, ಉಸಿರಿಗೂ,
ಬೆಸೆವ ಕಿಟಕಿ ಇದೊಂದೇ,

ಈ ಬ್ಲಾಗೆಂಬ ತೆರೆದ ಬಾಗಿಲು….

girl-in-open-door-stefan-kuhn

ಇನ್ನು ಮುಂದೆಂದೂ+++++++++++

ನಮ್ಮಿಬ್ಬರ ನಿಜದ ಪ್ರೀತಿಗೆ
ಕಾನೂನು ವಿಧಿಸಿದ ಶಿಕ್ಷೆ,
ಮರಣದಂಡನೆ…….!!!

ಇದೇ ನನ್ನ ಕೊನೆಯ ಮಾತು;
ನಿನ್ನನ್ನು ಅಂದೂ ಪ್ರೀತಿಸಿದ್ದೆ,
ಇನ್ನು ಮುಂದೆಂದೂ……………

ನಿನ್ನ ಕಾನೂನಿನ ಪ್ರಯತ್ನಕ್ಕೆ
ಜಯವಾಗಲಿ………………
ನನ್ನ ಸಾವಲ್ಲೂ ನಮ್ಮ ಪ್ರೀತಿಗೇ
ಜಯಸಿಗಲಿ………………….

lead_large